ADVERTISEMENT

ಶಹಾಬಾದ್‌: ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 10:34 IST
Last Updated 8 ನವೆಂಬರ್ 2019, 10:34 IST

ಶಹಾಬಾದ್‌: ಕಾಂಗ್ರೆಸ್‌ ಪಕ್ಷವು ನಗರದ ವಿವಿಧ ವಾರ್ಡ್‌ಗಳಲ್ಲಿ ಕಸ, ಕೊಚೆ ತುಂಬಿದ ಚರಂಡಿ ಗಾಗೂ ಗುಂಡಿ ಬಿದ್ದ ರಸ್ತೆಗಳನ್ನು ವಿಡಿಯೊ ಚಿತ್ರೀಕರಿಸಿ ಅದನ್ನು ಶಾಸಕ ಬಸವರಾಜ ಮತ್ತಿಮೂಡ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿರುವುದು ಖಂಡನೀಯ ಎಂದು ಬಿಜೆಪಿ ಮುಖಂಡರು ಗುರುವಾರ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ಮುಖಂಡರಾದ ಚಂದ್ರಕಾಂತ ಗೊಬ್ಬುರಕರ್, ಕನಕಪ್ಪ ದಂಡಗುಲಕರ್, ನಗರಸಭೆ ಸದಸ್ಯ ರವಿ ರಾಠೋಡ ಅವರು ಶಾಸಕರ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ಕರೆದು ‘ನಗರಸಭೆಯಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಹತ್ತು ವರ್ಷಗಳಿಂದ ಕಣ್ಣು ಮುಚ್ಚಿದ್ದ ಮುಖಂಡರು ಈಗ ಕಣ್ಣು ತೆರೆದಿದ್ದಾರೆ’ ಎಂದರು.

‘ಬಸವರಾಜ ಮತ್ತಿಮೂಡ ಅವರು ಶಾಸಕರಾಗಿ ಕೇವಲ ಒಂದೂವರೆ ವರ್ಷ ಆಗಿದೆ. ಆದರೆ, ಪುರಸಭೆ, ನಗರಸಭೆಯಲ್ಲಿ ಕೆಲ ವರ್ಷ ಬಿಟ್ಟರೆ, ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು. ಕಳೆದ ಐದು ವರ್ಷ ಕಾಂಗ್ರೆಸ್ ಪಕ್ಷದ ಶಾಸಕರೇ ಇದ್ದಾಗ, ಬ್ಲಾಕ್ ಅಧ್ಯಕ್ಷರಿಗೆ ನಗರದಲ್ಲಿರುವ ಕೊಳಚೆ, ಕಸ, ತುಂಬಿದ ಚರಂಡಿ ಕಂಡಿರಲಿಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

‘ಕಾಂಗ್ರೆಸ್ ಮುಖಂಡರು ಬಿಜೆಪಿ ಶಾಸಕ ವಿರುದ್ಧ ಆರೋಪಿಸುವ ಮುನ್ನ ತಮ್ಮ ಅಧಿಕಾರಾವಧಿಯಲ್ಲಿ ಏನು ಸಾಧಿಸಿದ್ದಾರೆ ಎಂದು ಆತ್ಮವಾಲೋಕನ ಮಾಡಿಕೊಳ್ಳಬೇಕಾಗಿತ್ತು’ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಅಧಿಕಾರದ ಅವಧಿಯಲ್ಲಿ ನಗರಸಭೆ ಸದಸ್ಯ ಅರುಣಕುಮಾರ ಪಟ್ಟಣಕರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸ್ವಂತ ಖರ್ಚಿನಲ್ಲಿ ಜೆಸಿಬಿ ಬಳಿಸಿ ಕರ್ನಾಟಕ ಲಾಡ್ಜ್, ಹಲವು ಭಾಗದಲ್ಲಿ ಕಸ, ಕೊಳಚೆಯನ್ನು ವಿಲೇವಾರಿ ಮಾಡಿದ್ದು ನಗರಸಭೆ ಅಧ್ಯಕ್ಷರಿಗಾಗಲೀ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರಿಗಾಗಲೀ ಕಾಣಲಿಲ್ಲವೆ? ಎಂದು ದೂರಿದರು.

ನಗರ ಅಭಿವೃದ್ಧಿ ಕುರಿತು ಕಾಂಗ್ರೆಸ್ ಮುಖಂಡರು ರಾಜಕೀಯ ಮಾಡದೆ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಪತ್ರಿಕಾಗೊಷ್ಠಿಯಲ್ಲಿ ನಗರಸಭೆ ಸದಸ್ಯೆ ಪಾರ್ವತಿ ಪವಾರ, ಮುಖಂಡರಾದ ನಿಂಗಣ್ಣ ಹುಳಗೋಳ, ವಿರೇಶ ಬಂದಳ್ಳಿ, ಭಾಗೀರತಿ ಗುನ್ನಾಪುರ, ಸದಾನಂದ ಕುಂಬಾರ, ಶ್ರೀಧರ ಜೋಶಿ, ಗುತ್ತೇದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.