ಕಲಬುರಗಿ:ನಗರದ ಭಾರತೀಯ ಸ್ಟೇಟ್ ಬ್ಯಾಂಕ್ನ ಸೂಪರ್ ಮಾರ್ಕೆಟ್ ಶಾಖೆ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯ, ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ವತಿಯಿಂದ ಮುಖ ದೃಢೀಕರಣ ಅಪ್ಲಿಕೇಶನ್(ಫೇಸ್ ಆಥೆಂಟಿಕೇಷನ್ ಅಪ್ಲಿಕೇಶನ್) ಮೂಲಕ ಪಿಂಚಣಿದಾರರ ಡಿಜಿಟಲ್ ಜೀವನ ಪ್ರಮಾಣ(ಲೈಫ್ ಸರ್ಟಿಫಿಕೇಟ್) ಸಲ್ಲಿಸುವ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ರಾಷ್ಟ್ರ ದಾದ್ಯಂತ ಕೇಂದ್ರದ ವಿವಿಧ ಸಚಿವಾಲಯಗಳು, ನೋಂದಾಯಿತ ಪಿಂಚಣಿದಾರರ ಸಂಘ, ಪಿಂಚಣಿ ವಿತರಿಸುವ ಬ್ಯಾಂಕ್ಗಳು ನವೆಂಬರ್ ಅಂತ್ಯದವರೆಗೂ ಈ ಅಭಿಯಾನ ನಡೆಸಲಿವೆ.
ಪಿಂಚಣಿದಾರರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಡಿಜಿಟಲ್ ಜೀವನ ಪ್ರಮಾಣ(ಡಿಎಲ್ಸಿ) ಬಗ್ಗೆ ಅರಿವು ಮೂಡಿಸಲುಪಿಂಚಣಿದಾರರ ಜತೆಗೆ ಸಂವಾದ ನಡೆಸಿದರು. ಸರಳ ಭಾಷೆಯಲ್ಲಿ ಮುಖ ದೃಢೀಕರಣ ತಂತ್ರಾಂಶದ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಸುವ ಪ್ರಕ್ರಿಯೆಯ ವಿವಿಧ ಹಂತಗಳನ್ನು ವಿವರಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೊಗಳ ಪ್ರದರ್ಶನ ಸಹ ನಡೆಯಿತು.
ಮೊಬೈಲ್ನಲ್ಲಿ ಜೀವನ್ಪ್ರಮಾಣ್(jeevanpraman) ಆ್ಯಪ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಮುಖ ದೃಢೀಕರಣದ ಜತೆಗೆ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಪಿಪಿಒ(ಪಿಂಚಣಿ ಪಾವತಿ ಆದೇಶ) ಸಂಖ್ಯೆ ಮಾಹಿತಿ ನೀಡಬೇಕು. ಒಂದು ನಿಮಿಷದಲ್ಲಿ ಜೀವನ ಪ್ರಮಾಣ ಪತ್ರ ಲಭ್ಯವಾಗಲಿದೆ. ಇದರಿಂದ ಭೌತಿಕವಾಗಿ ಬ್ಯಾಂಕ್ಗೆ ಬಂದು ಪ್ರಮಾಣ ಪತ್ರ ಸಲ್ಲಿಸುವ, ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ’ ಎಂದು ಅಧಿಕಾರಿಗಳು ತಿಳಿಸಿದರು.
ಅಭಿಯಾನದ ಅಂಗವಾಗಿ ನಗರದ ಜಗತ್ ಪ್ರದೇಶದ 75 ವರ್ಷದ ಪಿಂಚಣಿದಾರ ನಾರಾಯಣರಾವ್ ಅವರ ಮನೆಗೆ ತೆರಳಿದ ಎಸ್ಬಿಐ ಬ್ಯಾಂಕ್ ಎಜಿಎಂ ಪಿ. ವಿಕ್ರಮ್, ಪಿಂಚಣಿ ಇಲಾಖೆಯ ದೀಪಕ್ ಪುಂಡಿರ್, ರಾಜೇಶ್ವರ ಶರ್ಮಾ ಅವರು ಮೊಬೈಲ್ ಮೂಲಕ ಸ್ಥಳದಲ್ಲಿಯೇ ಪಿಂಚಣಿದಾರನ ಜೀವನ ಪ್ರಮಾಣ ಪತ್ರ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಎಸ್ಬಿಐ ಬ್ಯಾಂಕ್ ಡಿಜಿಎಂ ಪಿ.ಎಲ್. ಶ್ರೀನಿವಾಸ ರಾವ್ ಇತರೆ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.