ಚಿತ್ತಾಪುರ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಹೊಸೂರು ಗ್ರಾಮದ ಭೀಮಣ್ಣ ಹಣಮಂತ ಸೀಭಾ ಅವರ ಹೊಲದಲ್ಲಿ ಕಟಾವು ಮಾಡಿ ಸಂಗ್ರಹಿಸಿಟ್ಟಿದ್ದ ಕಡಲೆ ಬೆಳೆ ಸೋಮವಾರ ಸಂಜೆ ಬೆಂಕಿಗಾಹುತಿಯಾಗಿದೆ.
ಭೀಮಣ್ಣ ಅವರ ಸ್ವಂತ ಹೊಲ 20 ಎಕರೆ ಮತ್ತು ಗುತ್ತಿಗೆಗೆ ಪಡೆದ 5 ಎಕರೆ ಹೀಗೆ ಒಟ್ಟು 25 ಎಕರೆಯಲ್ಲಿ ಕಡಲೆ ಬೆಳೆಯಲಾಗಿತ್ತು. ಕಟಾವಿಗೆ ಬಂದ ಕಡಲೆ ಬೆಳೆ ಕಟಾವು ಮಾಡಿ ರಾಶಿ ಮಾಡಲೆಂದು ಹೊಲದಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಸಂಜೆ 6.30ರ ಸುಮಾರಿಗೆ ಬೆಂಕಿ ಹತ್ತಿ ಇಡೀ ಕಡಲೆ ಬೆಳೆ ಸುಟ್ಟು ಕರಕಲಾಗಿದೆ.
ಅಂದಾಜು 100 ರಿಂದ 110 ಚೀಲ ಕಡಲೆ ಫಸಲು ಇತ್ತು. ಕೈಗೆ ಬಂದ ತುತ್ತು ಬಾಯಿಗೆ ಬಾರದೆ ನಮಗೆ ದೊಡ್ಡ ಹಾನಿಯಾಗಿದೆ ಎಂದು ಭೀಮಣ್ಣ ಅವರು 'ಪ್ರಜಾವಾಣಿ' ಬಳಿ ನೋವು ತೋಡಿಕೊಂಡರು.
ಬೆಂಕಿ ಹತ್ತಿರುವ ಘಟನೆ ತಿಳಿಯುತ್ತಿದ್ದಂತೆ ಚಿತ್ತಾಪುರ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದಾಗ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ಶೇ 90ರಷ್ಟು ಕಡಲೆ ಬೆಳೆ ಸುಟ್ಟು ಕರಕಲಾಗಿದೆ ಎಂದು ಹೇಳಿದರು.
ಬೆಂಕಿ ಅವಘಡ ಸಂಭವಿಸಿದಾಗ ಕಡಲೆ ಬೆಳೆಯ ಹತ್ತಿರ ಯಾರೂ ಇರಲಿಲ್ಲ. ಹೇಗೆ ಬೆಂಕಿ ಹತ್ತಿದೆ ಎಂದು ಗೊತ್ತಾಗಿಲ್ಲ ಎಂದು ತಿಳಿಸಿದರು.
ಸಾತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಿಪಾಲ ಮೂಲಿಮನಿ ಹಾಗೂ ಕಂದಾಯ ಇಲಾಖೆಯ ಗ್ರಾಮ ಸಹಾಯಕ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಒಟ್ಟು ₹ 5 ಲಕ್ಷ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.