ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಪ್ರಸಿದ್ದ ಪ್ರವಾಸಿ ತಾಣ ಚಂದ್ರಂಪಳ್ಳಿ ಜಲಾಶಯದಲ್ಲಿ ಮತ್ತೆ ಮೊಸಳೆ ಕಾಣಿಸಿಕೊಂಡಿದೆ.
ಕಲಬುರ್ಗಿ ನಗರದ ಶರಣಬಸವೇಶ್ವರ ಕೆರೆಯಲ್ಲಿ ಪತ್ತೆಯಾದ ಮೊಸಳೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಚಂದ್ರಂಪಳ್ಳಿಯ ಜಲಾಶಯದಲ್ಲಿ ಹಲವು ವರ್ಷಗಳ ಹಿಂದೆ ತಂದು ಬಿಟ್ಟಿದ್ದರು. ಕೊರೊನಾ ಲಾಕ್ಡೌನ್ನಿಂದಾಗಿ ಜನರ ಓಡಾಟ ಕ್ಷೀಣಿಸಿದೆ. ಪ್ರವಾಸಿ ತಾಣ ಜನರಿಲ್ಲದೇ ಭಣಗುಡುತ್ತಿದೆ. ಇದರಿಂದ ಇಲ್ಲಿನ ವಾತಾವರಣ ಪ್ರಶಾಂತವಾಗಿರುವುದರ ಜತೆಗೆ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದರಿಂದ ಮೊಸಳೆ ಆಗಾಗ ಹೊರ ಬರುತ್ತಿದೆ ಎಂದು ಚಂದ್ರಂಪಳ್ಳಿ ಗ್ರಾಮದ ಮುಖಂಡ ವೀರಭದ್ರ ಚಾಂಗ್ಲೇರಾ ತಿಳಿಸಿದ್ದಾರೆ.
ಒಮ್ಮೊಮ್ಮೆ ಪ್ರತಿದಿನ ಮೊಸಳೆ ಕಾಣಿಸಿದರೆ, ಕೆಲವೊಮ್ಮೆ ಎರಡು ಮೂರು ದಿನಗಳಿಗೊಮ್ಮೆ ಜಲಾಶಯದ ದಂಡೆಯಲ್ಲಿ ಮತ್ತು ಸ್ಲೂಸ್ ಗೇಟಿಗೆ ನೀರು ಹೋಗಲು ಹಾಕಿದ ಮಣ್ಣಿನ ಒಡ್ಡಿನ ಮೇಲೆ ಮೊಸಳೆ ಬಂದು ವಿರಮಿಸುತ್ತಿದೆ ಎಂದರು.
ಮಹಿಳೆಯರು ಬಟ್ಟೆ ತೊಳೆಯಲು ಜಲಾಶಯಕ್ಕೆ ಹೋಗುತ್ತಾರೆ. ಅಡವಿಗೆ ಹೋದ ಜಾನುವಾರುಗಳು ಬಾಯಾರಿಕೆ ತಣಿಸಿಕೊಳ್ಳಲು ಜಲಾಶಯಕ್ಕೆ ಬರುತ್ತವೆ. ಹೀಗಾಗಿ, ಜಲಾಶಯಕ್ಕೆ ಹೋಗುವಾಗ ಎಚ್ಚರ ವಹಿಸಬೇಕೆಂದು ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.