ಕಾಳಗಿ: ‘ಸ್ವಾತಂತ್ರ್ಯ ಹೋರಾಟಗಾರರಾದ ನನ್ನ ತಂದೆ ಗೋಪಾಲದೇವ ಜಾಧವ ಮತ್ತು ಅಣ್ಣ ನರಸಿಂಗ್ ಜಾಧವ ಅವರು ನುಡಿದು ನಡೆದಂತೆ ನಾವು ಅವರ ಹಾದಿಯನ್ನೇ ಅನುಸರಿಸುತ್ತಿದ್ದೇವೆ’ ಎಂದು ಸಂಸದ ಉಮೇಶ ಜಾಧವ ಹೇಳಿದರು.
ಶುಕ್ರವಾರ ಬೆಡಸೂರ ಸಂಜಯ ನಗರ ತಾಂಡಾದ ತಮ್ಮ ಮನೆಯಲ್ಲಿ ಏರ್ಪಡಿಸಿದ ಸ್ವಾತಂತ್ರ್ಯ ಹೋರಾಟಗಾರ ಗೋಪಾಲದೇವ ಜಾಧವ ಅವರ 37ನೇ ಪುಣ್ಯಸ್ಮರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ನಮ್ಮ ತಂದೆ ಸಲ್ಲಿಸಿದ ಸೇವೆ ಅಮೋಘವಾಗಿದೆ. ಅವರ 36ನೇ ಪುಣ್ಯಸ್ಮರಣೆಯು ನನಗೆ ಮಹತ್ವದ ದಿನವಾಗಿತ್ತು. ಅಂದು ಇಡೀ ದೇಶವೇ ನನ್ನತ್ತ ತಿರುಗಿ ನೋಡುವಂಥ ಸ್ಥಿತಿ ನಿರ್ಮಾಣ ಮಾಡಿತ್ತು. ಆ ದಿನ ಅದೇಷ್ಟೊ ಜನ ನಾಯಕರು ನನ್ನ ಮನವೊಲಿಸುವ ಪ್ರಯತ್ನಕ್ಕೆ ಬಂದಿದ್ದರು. ಆದರೆ ಯಾರು ಬರಬೇಕಾಗಿತ್ತೊ ಅವರು ಮಾತ್ರ ಬಂದಿರಲಿಲ್ಲ’ ಎಂದು ತಮ್ಮ ಹಿಂದಿನ ರಾಜಕೀಯ ಬೆಳವಣಿಗೆಗಳನ್ನು ಹಂಚಿಕೊಂಡರು.
ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮನೋಹರ ಮಾತನಾಡಿ, ‘ಗೋಪಾಲದೇವ ಜಾಧವ ಮತ್ತು ಎಲ್ಲಾ ಜಾತಿ ಜನಾಂಗದವರ ಆಶೀರ್ವಾದದಿಂದ ಲಂಬಾಣಿ ಸಮುದಾಯವರು ಇದೀಗ ರಾಜಕೀಯದಲ್ಲಿ ಅಧಿಕಾರ ಗಳಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ನಾಯಕರು ಮೊದಲು ಬೇರೆ ಜಾತಿಯವರಿಗೆ ಆದ್ಯತೆ ಕೊಟ್ಟು ಕೆಲಸ ಮಾಡಿ ಪ್ರೀತಿ, ವಿಶ್ವಾಸ ಗಳಿಸಬೇಕು. ನಂತರದಲ್ಲಿ ನಮ್ಮವರನ್ನು ನೋಡಬೇಕು’ ಎಂದು ಹೇಳಿದರು.
ಜಿ.ಪಂ ಸದಸ್ಯ ಸಂಜೀವನ್ ಯಾಕಾಪುರ, ತಾ.ಪಂ ಇಒ ಅನೀಲ ರಾಠೋಡ, ಮುಖಂಡ ರಾಮರಾವ ಪಾಟೀಲ, ಬಾಬುರಾವ ಪಾಟೀಲ, ಶ್ರೀಮಂತ ಕಟ್ಟಿಮನಿ, ಮುಖ್ಯ ಎಂಜಿನಿಯರ್ ಎಸ್.ರಂಗನಾಥ ನಾಯಕ್, ಬಾಬು ವಾಲಿ, ಸೂರ್ಯಕಾಂತ ಕಟ್ಟಿಮನಿ, ರಾಜಕುಮಾರ ರಾಜಾಪುರ, ಶೇಖ್ ಭಕ್ತಿಯಾರ್ ಜಾಹಾಗೀರದಾರ್, ರಮೇಶ ಧುತ್ತರಗಿ, ವಿಠಲ ಜಾಧವ ಅನೇಕರು ಗೋಪಾಲದೇವ ಜಾಧವ ಅವರನ್ನು ಸ್ಮರಿಸಿದರು.
ಶಾಸಕ ಅವಿನಾಶ ಜಾಧವ, ಜಿ.ಪಂ ಸದಸ್ಯ ರಾಮಲಿಂಗಾರೆಡ್ಡಿ ದೇಶಮುಖ, ಸಂತೋಷ ಗಡಂತಿ, ರಾಮಶೆಟ್ಟಿ ಪಾಟೀಲ, ಮಲ್ಲಿನಾಥ ಕೋಲಕುಂದಿ, ಚಂದ್ರಕಾಂತ ಜಾಧವ, ಶೇಖರ ಪಾಟೀಲ, ಹಣಮಂತ ಒಡೆಯರಾಜ, ಬಾಬು ಹೀರಾಪುರ, ಶಿವಶರಣಪ್ಪ ಗುತ್ತೇದಾರ, ಇಬ್ರಾಹಿಂಪಾಶಾ ಗಿರಣಿಕರ್, ಸಂತೋಷ ಕಡಬೂರ, ರಮೇಶ ಕಿಟ್ಟದ, ವಿಷ್ಣು ಪರುತೆ, ಸಂತೋಷ ಜಾಧವ, ತುಳಸಿರಾಮ ಕೋಡ್ಲಿ ಇದ್ದರು. ರಾಮಚಂದ್ರ ಜಾಧವ ಸ್ವಾಗತಿಸಿದರು. ಶ್ರೀನಿವಾಸ ಚಿಂಚೋಳಿಕರ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.