ADVERTISEMENT

ಕೊಡಲಿಯಿಂದ ಕೊಚ್ಚಿ ಜೋಡಿ ಕೊಲೆ

ಬೆಳಗುಂಪಾ ಗ್ರಾಮ: ಅನೈತಿಕ ಸಂಬಂಧ ಶಂಕೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 20:04 IST
Last Updated 4 ಜೂನ್ 2019, 20:04 IST

ಕಲಬುರ್ಗಿ: ಅನೈತಿಕ ಸಂಬಂಧದ ಶಂಕೆಯ ಮೇರೆಗೆ ತಾಲ್ಲೂಕಿನ ಬೆಳಗುಂಪಾ ಗ್ರಾಮದಲ್ಲಿ ಮಂಗಳವಾರ ಮಹಿಳೆ ಮತ್ತುಆಕೆಯ ಪ್ರಿಯಕರ ಎನ್ನಲಾದ ವ್ಯಕ್ತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಮಡೆಮ್ಮ ಭೀಮಾಶಂಕರ ಮಾಂಗ (28) ಮತ್ತು ಶಂಕರ ಮ್ಯಾಕೇರಿ (40) ಕೊಲೆಯಾದವರು. ಇಬ್ಬರೂ ವಿವಾಹಿತರಾಗಿದ್ದು, ಇಬ್ಬರಿಗೂ ಎರಡು ಮಕ್ಕಳಿವೆ. ಇಬ್ಬರ ಮಧ್ಯೆಯೂ ಅನೈತಿಕ ಸಂಬಂಧ ಇತ್ತು ಎಂದು ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.

‘ಮಡೆಮ್ಮಳ ಪತಿ ಭೀಮಾಶಂಕರ ಆಕೆಯನ್ನು ಬಿಟ್ಟು ಹೋಗಿದ್ದ. ಹೀಗಾಗಿ ಬೆಳಗುಂಪಾ ಗ್ರಾಮದಲ್ಲಿಯೇ ಸಹೋದರ ಸಂಬಂಧಿಕರ ಜತೆಗೆ ವಾಸವಾಗಿದ್ದಳು. ಅದೇ ಗ್ರಾಮದ ಶಂಕರ ಮ್ಯಾಕೇರಿಯೊಂದಿಗೆ ಕೆಲವು ದಿನಗಳಿಂದ ಸಂಬಂಧ ಇತ್ತು. ಶಂಕರನಿಂದ ದೂರವಿರುವಂತೆ ಹಲವು ಸಲ ಸಂಬಂಧಿಗಳು ಹೇಳಿದ್ದರು. ಆದರೂ, ಮುಂದುವರೆಸಿದ್ದರು’ ಎನ್ನುವುದು ಪೊಲೀಸ್‌ ಮೂಲಗಳ ಮಾಹಿತಿ.

ADVERTISEMENT

‘ಮಂಗಳವಾರ ಸಂಜೆ ಮಡೆಮ್ಮ ಹಾಗೂ ಶಂಕರ ಒಟ್ಟಿಗೇ ಕೋಣೆಯಲ್ಲಿದ್ದರು. ಈ ವೇಳೆ ಅಲ್ಲಿಗೆ ಬಂದ ಹಂತಕರು, ಮಡೆಮ್ಮಳನ್ನು ಕೋಣೆಯಲ್ಲಿಯೇ ಕೊಚ್ಚಿ ಹಾಕಲಾಗಿದೆ. ಓಡಿ ಹೋಗಲು ಯತ್ನಿಸಿದ ಶಂಕರನನ್ನು ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಹಂತಕರು ಪರಾರಿಯಾಗಿದ್ದಾರೆ. ಕೊಲೆಯನ್ನು ಯಾರು ಮಾಡಿದ್ದಾರೆ ಎಂಬುದು ನಿಖರವಾಗಿ ಗೊತ್ತಾಗಿಲ್ಲ. ಶೋಧ ಮುಂದುವರೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಇನ್‌ಸ್ಪೆಕ್ಟರ್‌ ಜ್ಯೋತಿರ್ಲಿಂಗ ಹೊನ್ನಾಕಟ್ಟಿ,ಪಿಎಸ್ಐ ಭೀಮರತ್ನ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಫರಹತಾಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.