ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಭೂಕಂಪನ ಪೀಡಿತ ಗಡಿಕೇಶ್ವಾರ ಗ್ರಾಮದಲ್ಲಿ ಒಂದೇ ದಿನ 4 ಬಾರಿ ಲಘು ಕಂಪನ ಸಂಭವಿಸಿದೆ ಎಂದು ಗ್ರಾಮದ ಮಾರುತಿ ಹೊಸಳ್ಳಿ ಮತ್ತು ಸಿದ್ದಲಿಂಗಪ್ಪ ಹಲಚೇರಾ ತಿಳಿಸಿದ್ದಾರೆ.
ಮಧ್ಯಾಹ್ನ 1.55ರಿಂದ 2.05ರ ಮಧ್ಯೆ ಮೂರು ಬಾರಿ ಹಾಗೂ 2.39ಕ್ಕೆ ಒಮ್ಮೆ ಭೂಮಿಯಿಂದ ಶಬ್ದ ಕೇಳಿ ಬಂದಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ದಟ್ಟ ಮೋಡ ಹಾಗೂ ಮಳೆಯ ಸಿಂಚನ ಹೊರಗಡೆ ಕಾಣಿಸಿದರೆ ಕಂಪನದಿಂದ ಬಿರುಕು ಬಿಟ್ಟ ಕಲ್ಲು ಮಣ್ಣಿನ ಗೋಡೆಯ ಮನೆಯ ಒಳಗಡೆ ಹೋಗಲು ಹಿಂಜರಿಯುತ್ತಿದ್ದಾರೆ. ಬಹುತೇಕರು ತಾಡಪಾಲುಗಳಿಂದ ಶೆಡ್ ನಿರ್ಮಿಸಿಕೊಂಡಿದ್ದಾರೆ. ಇನ್ನು ಕೆಲವರು ರಸ್ತೆ ಬದಿ ಕಟ್ಟೆಗಳಲ್ಲಿ ಕುಳಿತು ಕಾಲ ಕಳೆಯುವಂತಾಗಿದೆ. ಬಹುತೇಕರು ಭೂಕಂಪಕ್ಕೆ ಹೆದರಿ ಹೊಲಗಳಿಗೆ ತೆರಳುತ್ತಿದ್ದಾರೆ ಆದರೆ ಮಕ್ಕಳು, ವೃದ್ಧರು, ಅಂಗವಿಕಕರು ಭಯದಲ್ಲಿಯೇ ಕಾಲಕಳೆಯುವಂತಾಗಿದೆ ಎಂದು ರೈತ ಮುಖಂಡ ಸಂತೋಷ ಬಳಿ ತಿಳಿಸಿದರು.
ಇಲ್ಲಿ ನಿರಂತರ ಭೂಮಿಯಿಂದ ಸದ್ದು ಕೇಳಿ ಬರುತ್ತಿರುವುದರಿಂದ ಹೆಚ್ಚಿನ ಅಧ್ಯಯನ ನಡೆಯುತ್ತಿದೆ. ಆದರೆ ಜನರಿಗೆ ಮಾತ್ರ ಪರಿಹಾರ ಮರಿಚೀಕೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.