ADVERTISEMENT

ಸುಳ್ಳು ಮಾಹಿತಿ ನೀಡಿದ್ದಕ್ಕೆ ಸೇವೆಯಿಂದ ವಜಾ

ಗೊಬ್ಬುರ (ಬಿ): ವೇತನ ಮರುಪಾವತಿಗೆ ಮುಂದಾದ ಆರೋಗ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 3:47 IST
Last Updated 1 ಜುಲೈ 2021, 3:47 IST

ಕಲಬುರ್ಗಿ: ಸುಳ್ಳು ಮಾಹಿತಿ ನೀಡಿದ ಆರೋಪದಡಿ ಅಫಜಲಪುರ ತಾಲ್ಲೂಕಿನ ಗೊಬ್ಬುರ (ಬಿ) ಗ್ರಾಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯಾಗಿದ್ದ ಮೋಹನ ರಾಠೋಡ ಎಂಬುವವರನ್ನು ಸೇವೆಯಿಂದ ವಜಾ ಮಾಡಿದ್ದಲ್ಲದೇ, ತಮ್ಮ ಸೇವಾವಧಿಯಲ್ಲಿ ಪಡೆದ ₹ 5.29 ಲಕ್ಷ ವೇತನ ಮರುಪಾವತಿಗೆ ಆರೋಗ್ಯ ಇಲಾಖೆ ಆದೇಶಿಸಿದೆ.

ಗೊಬ್ಬುರ (ಬಿ) ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಮೋಹನ ರಾಠೋಡ ಸಮುದಾಯ ಆರೋಗ್ಯ ಅಧಿಕಾರಿ (ಎಂಎಲ್ಎಚ್‌ಪಿ)ಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ತಮ್ಮ ವಿದ್ಯಾಭ್ಯಾಸ ಕುರಿತಂತೆ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಗೆ ಅಪೂರ್ಣವಾದ ಮಾಹಿತಿ ನೀಡಿದ್ದರು. ಈ ಕುರಿತಂತೆ ಡಾ.ಅಂಬೇಡ್ಕರ್ ಯುವ ಸೇನಾ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ತಳಕೇರಿ ಇಲಾಖೆಗೆ ದೂರು ಕೊಟ್ಟಿದ್ದರು.

ADVERTISEMENT

ಈ ದೂರಿನ ಅನ್ವಯ ನಿವೃತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಾಧವರಾವ ಪಾಟೀಲ ನೇತೃತ್ವದಲ್ಲಿ ತನಿಖೆ ಮಾಡಿಸಲಾಗಿತ್ತು. ಅವರ ತನಿಖಾ ವರದಿ ಆಧಾರದ ಮೇಲೆ ಮೋಹನ ಅವರಿಗೆ ತಮ್ಮ ಸೇವಾವಧಿಯಲ್ಲಿ ವೇತನವಾಗಿ ಪಡೆದ ಹಣವನ್ನು ಜಿಲ್ಲಾ ಆರೋಗ್ಯ ಇಲಾಖೆಯ ಬ್ಯಾಂಕ್ ಖಾತೆಗೆ ಮರುಪಾವತಿ ಮಾಡಬೇಕೆಂದು ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಶಿವಕುಮಾರ್ ದೇಶಮುಖ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.