ಕಲಬುರ್ಗಿ: ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಪರವಾಗಿ ಮಾತನಾಡಿದರು ಎಂಬ ಕಾರಣಕ್ಕೆ ಸಿಟ್ಟಿಗೆದ್ದ ನಾಲ್ವರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಹಲ್ಲುಗಳನ್ನು ಮುರಿದು ಜೀವ ಬೆದರಿಕೆ ಹಾಕಿದ ಆರೋಪ ಸಾಬೀತಾಗಿದ್ದರಿಂದ ಚಿಂಚೋಳಿ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಮೋಜಮ್ ಪಟೇಲ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಚಿಂಚೋಳಿ ತಾಲ್ಲೂಕಿನ ಇರಕಪಳ್ಳಿ ಗ್ರಾಮದ ಗುಂಡಪ್ಪ ಬಾಬಣ್ಣ ಮೋಮಾಯಿ, ದೇವಿಂದ್ರಪ್ಪ ಸಿದ್ದಪ್ಪ ತಳವಾರ, ಶಿವಶರಣಪ್ಪ ಬಾಬಣ್ಣ ಮೋಮಾಯಿ, ದಶರಥ ಭೀಮಣ್ಣ ಹಲಚೇರಾ ಅವರಿಗೆ ಐಪಿಸಿ ಸೆಕ್ಷನ್ 326ರ ಅಡಿ ಎರಡು ವರ್ಷ ಸಾದಾ ಕಾರಾಗೃಹ ಶಿಕ್ಷೆ, ತಲಾ ₹ 2 ಸಾವಿರ ದಂಡ, ಐಪಿಸಿ ಸೆಕ್ಷನ್ 324ರಡಿ ತಲಾ ₹ 2 ಸಾವಿರ ದಂಡ, ತಪ್ಪಿದಲ್ಲಿ ಆರು ತಿಂಗಳ ಹೆಚ್ಚುವರು ಕಾರಾಗೃಹ ವಾಸ, ಐಪಿಸಿ ಸೆಕ್ಷನ್ 504ರಡಿ ₹ 1 ಸಾವಿರ ದಂಡ, ತಪ್ಪಿದಲ್ಲಿ 1 ತಿಂಗಳು ಕಾರಾಗೃಹ ಶಿಕ್ಷೆಯನ್ನು ನ್ಯಾಯಾಧೀಶೆ ಬಿ.ಶಿಲ್ಪಾ ವಿಧಿಸಿದರು.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರಾಜಕುಮಾರ್ ವಾದ ಮಂಡಿಸಿದ್ದರು. ಸುಲೇಪೇಟ ಠಾಣೆ ಪಿಎಸ್ಐ ಅಕ್ಕಮಹಾದೇವಿ ಲೀಲೆ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.