ADVERTISEMENT

ಮಹಾನಗರ ಪಾಲಿಕೆ ‘ಗದ್ದುಗೆ ಗುದ್ದಾಟ’ ಇಂದು

ಮತ್ತೆ ಕಾಂಗ್ರೆಸ್‌ ಪಾಲಾಗುವ ಸಾಧ್ಯತೆ: ಅಭ್ಯರ್ಥಿ ಘೋಷಣೆಯಷ್ಟೇ ಬಾಕಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 6:21 IST
Last Updated 7 ಆಗಸ್ಟ್ 2025, 6:21 IST
ಕಲಬುರಗಿ ಮಹಾನಗರ ಪಾಲಿಕೆ ಕಚೇರಿ 
ಕಲಬುರಗಿ ಮಹಾನಗರ ಪಾಲಿಕೆ ಕಚೇರಿ    

ಕಲಬುರಗಿ: ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್‌, ಉಪಮೇಯರ್ ಸ್ಥಾನಕ್ಕೆ ಗುರುವಾರ (ಆ.7) ಚುನಾವಣೆ ನಿಗದಿಯಾಗಿದೆ. ಮೇಯರ್‌ ಹಾಗೂ ಉಪಮೇಯರ್‌ ಗದ್ದುಗೆ ಮತ್ತೆ ಕಾಂಗ್ರೆಸ್‌ಗೆ ದೊರೆಯುವ ಸಾಧ್ಯತೆ ಕಂಡುಬರುತ್ತಿದೆ. ಆದರೆ, ಬಿಜೆಪಿ ಸಹ ತೀವ್ರ ಪೈಪೋಟಿ ಒಡ್ಡುವ ಸಾಧ್ಯತೆ ಇದ್ದು, ಜೆಡಿಎಸ್‌ನ ನಾಲ್ವರು ಸದಸ್ಯರ ಬೆಂಬಲ ಪಡೆದು ಅಧಿಕಾರದ ಗದ್ದುಗೆ ಏರಲು ಕಸರತ್ತು ನಡೆಸಿದೆ.

ಮಧ್ಯಾಹ್ನ 12.30ಕ್ಕೆ ಪಾಲಿಕೆಯ ಟೌನ್‌ಹಾಲ್‌ನಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿಯಾದ ಪ್ರಾದೇಶಿಕ ಆಯುಕ್ತೆ ಝಹೀರಾ ನಸೀಮ್ ತಿಳಿಸಿದ್ದಾರೆ.

ಪಾಲಿಕೆ ಸದಸ್ಯರು ಹಾಗೂ ಪದನಿಮಿತ್ತ ಸದಸ್ಯರು ಸೇರಿ ಕಾಂಗ್ರೆಸ್‌ ಬಳಿ 35 ಮತದಾರರು ಇದ್ದು, ಅಗತ್ಯ ಬಹುಮತವಿದೆ. ಬಹುಮತದ ಅಂಚಿನಲ್ಲಿರುವ ಬಿಜೆಪಿ ಬಳಿ 31 ಸಂಖ್ಯಾ ಬಲವಿದೆ. ಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಿದ್ದು, ಉಪಮೇಯರ್‌ ಸ್ಥಾನ ಹಿಂದುಳಿದ ವರ್ಗ (ಬಿ)ಕ್ಕೆ ಮೀಸಲಾಗಿದೆ. ಉಪಮೇಯರ್‌ ಸ್ಥಾನಕ್ಕೆ ವಾರ್ಡ್‌ ನಂ.45ರ ಸದಸ್ಯೆ ತೃಪ್ತಿ ಶಿವಶರಣಪ್ಪ ಅಲ್ಲದ(ಲಾಖೆ) ಬಹುತೇಕ ಅಂತಿಮವಾಗಿದ್ದು, ಮೇಯರ್‌ ಸ್ಥಾನಕ್ಕೆ ಮಾತ್ರ ಕಾಂಗ್ರೆಸ್‌ನಲ್ಲಿ ಪೈಪೋಟಿ ನಡೆದಿದೆ.

ADVERTISEMENT

ಅಚ್ಚರಿಯಂದರೆ 17 ಮಹಿಳಾ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ನಲ್ಲಿ ಸಾಮಾನ್ಯ ವರ್ಗದ ಮಹಿಳೆ ಒಬ್ಬರೂ ಇಲ್ಲ. ಹೀಗಾಗಿ ಇತರ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ವಾರ್ಡ್‌ ನಂ.15ರ ನಜ್ಮಾ ಬೇಗಂ ಮೊಹಮ್ಮದ ತಾಹೇರ ಅಲಿ, ವಾರ್ಡ್‌ ನಂ.20ರ ಫರ್ಹಾ ಖುಸ್ರೂ ಜಾಗಿರದಾರ, ವಾರ್ಡ್‌ ನಂ.43ರ ವರ್ಷಾ ಜಾನೆ, ವಾರ್ಡ್‌ ನ.49ರ ಲತಾ ರಾಠೋಡ ಪ್ರಬಲ ಆಕಾಂಕ್ಷಿಗಳಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ತೀರ್ಮಾನವೇ ಅಂತಿಮ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಮೇಯರ್‌ ಅಭ್ಯರ್ಥಿ ಅಂತಿಮಗೊಳಿಸಲು ವಿಧಾನ ಪರಿಷತ್‌ ಸದಸ್ಯ ವಸಂತಕುಮಾರ ಕೆಪಿಸಿಸಿ ವೀಕ್ಷಕರಾಗಿ ಆಗಮಿಸಿದ್ದು, ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಸಭೆ ನಡೆಸಿ ಪಾಲಿಕೆ ಸದಸ್ಯರು ಮತ್ತು ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್‌ಗೆ ತಿಳಿಸಿದ್ದಾರೆ. ಹೀಗಾಗಿ ಅಭ್ಯರ್ಥಿ ಹೆಸರು ಬೆಳಿಗ್ಗೆಯೇ ಘೋಷಣೆಯಾಗಲಿದೆ.

55 ವಾರ್ಡ್‌ಗಳ ಪೈಕಿ 27 ಸದಸ್ಯರು ಕಾಂಗ್ರೆಸ್‌ನವರಿದ್ದರೆ, ಬಿಜೆಪಿಯ 23, ಜೆಡಿಎಸ್‌ನ ನಾಲ್ವರು ಮತ್ತು ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಪಾಲಿಕೆ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು ಎಲ್ಲರೂ ಸೇರಿ ಒಟ್ಟು ಮತದಾರರ ಸಂಖ್ಯೆ 66 ಆಗಿದ್ದು ಬಹುಮತಕ್ಕೆ 34 ಮತಗಳ ಅಗತ್ಯವಿದೆ.

ಮಲ್ಲಿಕಾರ್ಜುನ ಖರ್ಗೆ ಗೈರು: ಮೇಯರ್‌, ಉಪಮೇಯರ್‌ ಚುನಾವಣೆಯಲ್ಲಿ ಸಂಸದರು ಮತ್ತು ಶಾಸಕರ ಮತಗಳು ನಿರ್ಣಾಯಕವಾಗಿವೆ. ಸಂಸತ್‌ ಅಧಿವೇಶನ ನಡೆಯುತ್ತಿರುವುದರಿಂದ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಹಾಗೂ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಗೈರಾಗಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ತಿಳಿಸಿದ್ದಾರೆ.

ಮೈತ್ರಿ ಬಲದಲ್ಲಿ ಗೆದ್ದು ಬೀಗುತ್ತಾ ಬಿಜೆಪಿ?

ಬಿಜೆಪಿಗೆ ಜೆಡಿಎಸ್‌ನ ನಾಲ್ವರು ಸದಸ್ಯರ ಮೈತ್ರಿ ಬಲವಿದೆ. ಹೀಗಾಗಿ ಒಟ್ಟು ಬಲ 31ಕ್ಕೆ ಏರಿಕೆಯಾಗಿದ್ದು ಮ್ಯಾಜಿಕ್‌ ನಂಬರ್ ಅಂಚಿನಲ್ಲಿದೆ. ಕಾಂಗ್ರೆಸ್‌ನಲ್ಲಿ ಮೇಯರ್‌ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದರಿಂದ ಕೊನೆ ಗಳಿಗೆಯಲ್ಲಿ ಅಸಮಾಧಾನಿತರನ್ನು ಬಿಜೆಪಿ ತನ್ನತ್ತ ಸೆಳೆಯುವ ಸಾಧ್ಯತೆ ಇದೆ. ಇಲ್ಲದಿದ್ದರೆ ಅಸಮಾಧಾನಿತರನ್ನು ಚುನಾವಣೆಯಿಂದ ದೂರ ಉಳಿಯುವಂತೆ ಮಾಡಿ ಗದ್ದುಗೆ ಹಿಡಿಯುವ ಲೆಕ್ಕಾಚಾರದಲ್ಲಿದೆ. ಹೀಗಾಗಿ ಮೇಯರ್ ಸ್ಥಾನಕ್ಕೆ ಗಂಗಮ್ಮ ಮುನ್ನಳ್ಳಿ ಹಾಗೂ ಉಪಮೇಯರ್ ಸ್ಥಾನಕ್ಕೆ ಪಾರ್ವತಿ ದೇವದುರ್ಗ ಅವರನ್ನು ಕಣಕ್ಕಿಳಿಸಲಿದೆ ಎಂದು ಮೂಲಗಳು ತಿಳಿಸಿವೆ. 

4 ಸ್ಥಾಯಿ ಸಮಿತಿಗಳಿಗೂ ಚುನಾವಣೆ

ಮೇಯರ್ ಉಪಮೇಯರ್‌ ಜತೆಗೆ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೂ ಆ.7ರಂದೇ ಚುನಾವಣೆ ನಡೆಯಲಿದೆ. ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ನಗರ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಮತ್ತು ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಚುನಾವಣೆ ನಡೆಯಲಿದೆ. 

ಪದನಿಮಿತ್ತ ಸದಸ್ಯರು...

ಕಾಂಗ್ರೆಸ್‌: ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಸಂಸದ, ರಾಧಾಕೃಷ್ಣ ದೊಡ್ಡಮನಿ ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್‌ ಫಾತಿಮಾ, ವಿಧಾನ ಪರಿಷತ್‌ ಸದಸ್ಯರಾದ ಚಂದ್ರಶೇಖರ ಪಾಟೀಲ ಹುಮನಾಬಾದ್‌ ,ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ.

ಬಿಜೆಪಿ: ಶಾಸಕ ಬಸವರಾಜ ಮತ್ತಿಮಡು ವಿಧಾನ ಪರಿಷತ್‌ ಸದಸ್ಯರಾದ ಶಶೀಲ ನಮೋಶಿ, ಸುನೀಲ್‌ ವಲ್ಯಾಪುರೆ, ಬಿ.ಜಿ.ಪಾಟೀಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.