ಕಲಬುರ್ಗಿ: ‘ಅಂಬೇಡ್ಕರ್ ಅವರು ಕೇವಲ ಭಾರತದಲ್ಲಿ ಮಾತ್ರವಲ್ಲ; ಇಡೀ ವಿಶ್ವದಲ್ಲೇ ನೊಂದವರ ಕಣ್ಣೀರು ಒರೆಸಿದವರು. ನೊಂದ ಹೃದಯಗಳನ್ನು ಇಷ್ಟೊಂದು ಆಳವಾಗಿ, ಸ್ಫೂರ್ತಿದಾಯಕವಾಗಿ, ಪರಿಣಾಮಕಾರಿಯಾಗಿ ಹೊಕ್ಕ ಮತ್ತೊಬ್ಬ ಮಾನವತಾವಾದಿಯನ್ನು ನಾವು ನೋಡಲಾರೆವು’ ಎಂದು ಕೇಂದ್ರ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮುಖ್ಯ ಅಧೀಕ್ಷಕ ಪಿ.ಎಸ್.ರಮೇಶ ಅಭಿಪ್ರಾಯ ಪಟ್ಟರು.
ಇಲ್ಲಿನ ಕೇಂದ್ರ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯಲ್ಲಿ ಭಾನುವಾರ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಭಾರತಕ್ಕೆ ಸಂವಿಧಾನ ರಚಿಸಿದ ಮಹಾ ಮೇಧಾವಿ ಅಂಬೇಡ್ಕರ್. ಅವರು ಕಟ್ಟಿಕೊಟ್ಟ ಈ ಸಂವಿಧಾನ ವಿಭಿನ್ನ ಮತಗಳ, ಅಸಂಖ್ಯಾತ ಜಾತಿಗಳ, ಲೆಕ್ಕವಿಲ್ಲದಷ್ಟು ಭಾಷೆಗಳ, ವಿಶೇಷ ಸಾಂಸ್ಕೃತಿಕ ವಿಸ್ಮಯಕಾರಿ ಆಚರಣೆಗಳ ಈ ದೇಶವನ್ನು ಒಂದು ಜಾತ್ಯತೀತ ರಾಷ್ಟ್ರವನ್ನಾಗಿ ಕಟ್ಟಲು ಸಾಧ್ಯವಾಯಿತು. ಬಂದಿಖಾನೆಯಲ್ಲಿರುವ ಕೈದಿಗಳು ಸಹೋದರತ್ವ ಭಾವನೆಯಿಂದ ಒಟ್ಟಾರೆ ಜಾತಿ ರಹಿತವಾಗಿ ಬಾಳಬೇಕು’ ಎಂದರು.
ಇಲಾಖೆಯ ಸಹಾಯಕ ಅಧೀಕ್ಷಕರಾದ ವಿ.ಕೃಷ್ಣಮೂರ್ತಿ, ವೈದ್ಯಾಧಿಕಾರಿ ಡಾ.ಅಣ್ಣಾರಾವ ಪಾಟೀಲ, ಶಿಕ್ಷಕರಾದ ನಾಗರಾಜ ಮುಲಗೆ, ಜೈಲರ್ಗಳಾದ ಸೈನಾಜ್ ಎಂ. ನಿಗೇವಾನ್, ಗೋಪಾಲಕೃಷ್ಣ ಕುಲಕರ್ಣಿ, ಅರ್ಜುನಸಿಂಗ್ ಚವ್ಹಾಣ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.