ಚಿತ್ತಾಪುರ: ‘ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿಯಾದ ನನಗೆ ಚುನಾಯಿತ ಪ್ರತಿನಿಧಿಗಳು ಮರು ಆಯ್ಕೆ ಮಾಡಿದರೆ ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡುವೆ’ ಎಂದು ಅಭ್ಯರ್ಥಿ ಬಿ.ಜಿ ಪಾಟೀಲ್ ಹೇಳಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ವಿಧಾನ ಪರಿಷತ್ ಚುನಾವಣೆ ನಿಮಿತ್ತ ಬಿಜೆಪಿಯಿಂದ ಸೋಮವಾರ ಆಯೋಜಿಸಿದ್ದ ಚಿತ್ತಾಪುರ ಪುರಸಭೆ, ದಿಗ್ಗಾಂವ, ಸಾತನೂರು, ಮೊಗಲಾ, ಭಂಕೂರು, ಮಾಲಗತ್ತಿ, ರಾವೂರು, ಹೊನಗುಂಟಾ, ದಂಡೋತಿ, ಭಾಗೋಡಿ ಗ್ರಾಮ ಪಂಚಾಯಿತಿ ಸದಸ್ಯರ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯರಿಗೆ ವಾರ್ಷಿಕ ಕೇವಲ ₹2 ಕೋಟಿ ಅನುದಾನ ಬರುತ್ತದೆ. ಹೆಚ್ಚಿನ ಅನುದಾನ ದೊರೆಯುವುದಿಲ್ಲ. ಶಾಸಕರಿಗೆ ಹೆಚ್ಚಿನ ಅನುದಾನ ಇರುತ್ತದೆ. ಚುನಾವಣೆಯ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ಮತ್ತು ಅನುದಾನ ನೀಡಲಿದ್ದಾರೆ. ಈ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಮಾಹಿತಿ ಇದ್ದು, ಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿ ಸಬಲೀಕರಣ ಹೆಚ್ಚಾಗಲಿದೆ ಎಂದರು.
ಸಭೆ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ, ಬಿಜೆಪಿ ಬೆಂಬಲಿತ ಸ್ಥಳೀಯ ಸಂಸ್ಥೆಯ ಚುನಾಯಿತ ಪ್ರತಿನಿಧಿಗಳು ಒಗ್ಗಟ್ಟು ತೊರಬೇಕು ಎಂದು ಅವರು ಹೇಳಿದರು.
ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ್, ಮುಖಂಡ ಚಂದ್ರಶೇಖರ ಅವಂಟಿ, ಪುರಸಭೆ ಸದಸ್ಯ ನಾಗರಾಜ ಭಂಕಲಗಾ, ಚಂದ್ರಶೇಖರ ಅವಂಟಿ ಮಾತನಾಡಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ನೀಲಕಂಠ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮಹಿಳಾ ನಿಗಮದ ಅಧ್ಯಕ್ಷೆ ಶಶಿಕಲಾ ತೆಂಗಳಿ, ಬಿಜೆಪಿ ಮುಖಂಡರಾದ ಸೋಮಶೇಖರ ಪಾಟೀಲ್ ಬೆಳಗುಂಪಾ, ಶರಣಗೌಡ ಭೀಮನಹಳ್ಳಿ, ಗುಂಡಣ್ಣ ಬಾಳಿ, ಬಸವರಾಜ ಇಂಗಿನ್, ರವೀಂದ್ರ ಸಜ್ಜನಶೆಟ್ಟಿ, ಬಸವರಾಜ ಬೆಣ್ಣೂರಕರ್, ವಿಠಲ್ ನಾಯಕ, ಕವಿತಾ ಚವಾಣ್, ಅಯ್ಯಪ್ಪ ರಾಮತೀರ್ಥ, ದೀಪಕ್ ಹೊಸೂರಕರ್, ನಾಗುಬಾಯಿ ಜಿತುರೆ, ಬಾಲಾಜಿ ಬುರಬುರೆ ಇದ್ದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗರಾಜ ಹೂಗಾರ ನಿರೂಪಿಸಿದರು. ರಾಮದಾಸ್ ಚವಾಣ್ ಸ್ವಾಗತಿಸಿದರು. ಮಲ್ಲಿಕಾರ್ಜುನ ಪೂಜಾರಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.