ADVERTISEMENT

ಪ್ರಿಯಕರನ ಜತೆ ಸಂಚು ರೂಪಿಸಿ ಪತಿಯ ಕೊಲೆ: ಇಬ್ಬರು ಆರೋಪಿಗಳ ಬಂಧನ

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಸ್ನೇಹಿತ; ಇಬ್ಬರ ಬಂಧನ, ಮೃತನ ಪತ್ನಿಗಾಗಿ ಶೋಧ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 15:33 IST
Last Updated 10 ಸೆಪ್ಟೆಂಬರ್ 2024, 15:33 IST
ಜೈಭೀಮ
ಜೈಭೀಮ   

ಕಲಬುರಗಿ: ಪ್ರಿಯಕರನ ಜತೆಗೆ ಸೇರಿ ಸಂಚು ರೂಪಿಸಿ ಪತಿಯನ್ನು ಪತ್ನಿ ಕೊಲೆ ಮಾಡಿಸಿರುವುದು ಪ್ರಕರಣದ ತನಿಖೆಯಿಂದ ಬೆಳಕಿಗೆ ಬಂದಿದೆ. ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತನ ಪತ್ನಿಗಾಗಿ ಶೋಧಕಾರ್ಯ ನಡೆಸಿದ್ದಾರೆ.

‘ಕೆಸರಟಗಿ ಉದ್ಯಾನ ಸಮೀಪದ ರೈಲ್ವೆ ಕೆಳ ಸೇತುವೆ ಬಳಿ ಕಪಿಲ್ ಗಾಯಕ್ವಾಡ್ ಅವರನ್ನು ಕೊಲೆ ಮಾಡಿದ ಆರೋಪದಡಿ ಪಟ್ಟಣ ನಿವಾಸಿ ಜೈಭೀಮ ನಾಗಪ್ಪ (25) ಮತ್ತು ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವರದ ದತ್ತಾತ್ರೇಯ ದೇವಿಂದ್ರಪ್ಪ ದೊಡಮನಿಯನ್ನು (20) ಬಂಧಿಸಲಾಗಿದೆ. ಕೊಲೆಯಲ್ಲಿ ಶಾಮೀಲಾದ, ಕಪಿಲ್ ಅವರ ಪತ್ನಿ ಭಾಗ್ಯಶ್ರೀ ಪತ್ತೆಗಾಗಿ ಬಲೆ ಬೀಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಜೈಭೀಮ ಎಂಬಾತ ಕಪಿಲ್ ಸ್ನೇಹಿತನಾಗಿದ್ದು, ಭಾಗ್ಯಶ್ರೀ ಜತೆಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ. ಈ ವಿಷಯ ಕಪಿಲ್‌ಗೆ ಗೊತ್ತಾಗಿ ದಂಪತಿ ನಡುವೆ ಒಂದು ತಿಂಗಳಿಂದ ಮನೆಯಲ್ಲಿ ಜಗಳ ಆಗುತ್ತಿತ್ತು. ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿದ್ದ ಕಪಿಲ್, ಕುಡಿದ ಮತ್ತಿನಲ್ಲಿ ಜೈಭೀಮಗೆ ಬೆದರಿಕೆ ಹಾಕಿದ್ದ. ಇದಕ್ಕೆ ಪ್ರತಿಯಾಗಿ ಭಾಗ್ಯಶ್ರೀ ಮತ್ತು ಜೈಭೀಮ ಸೇರಿ ಕಪಿಲ್ ಅವರ ಕೊಲೆಗೆ ಸಂಚು ರೂಪಿಸಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ’ ಎಂದು ಹೇಳಿದರು.

ADVERTISEMENT

‘ಸೆಪ್ಟೆಂಬರ್ 7ರ ರಾತ್ರಿ ಕಪಿಲ್ ಮತ್ತು ಭಾಗ್ರಶ್ರೀ ಕೂಲಿ ಕೆಲಸ ಮಾಡಿಕೊಂಡು ಕೆಸರಟಗಿ ಗ್ರಾಮದಿಂದ ಆಶ್ರಯ ಕಾಲೊನಿಯ ತಮ್ಮ ಮನೆಗೆ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ರೈಲ್ವೆ ಕೆಳ ಸೇತುವೆ ಬಳಿ ಜೈಭೀಮ ಮತ್ತು ದತ್ತಾತ್ರೇಯ ಸೇರಿ ಕಪಿಲ್ ಮೇಲೆ ಹಲ್ಲೆ ಮಾಡಿದರು. ಈ ವೇಳೆ ಭಾಗ್ಯಶ್ರೀ ಅವರು ಓಡಿ ಹೋಗಿ ಪರಿಚಯಸ್ಥರನ್ನು ಕರೆದುಕೊಂಡು ಬರುವಷ್ಟರಲ್ಲಿ ಕಪಿಲ್ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು’ ಎಂದು ತಿಳಿಸಿದರು.

ದತ್ತಾತ್ರೇಯ

‘ಪ್ರಕರಣ ದಾಖಲಿಸಿಕೊಳ್ಳುವಾಗಲೇ ಭಾಗ್ಯಶ್ರೀ ಮೇಲೆ ಅನುಮಾನ ಬಂದಿತ್ತು. ಭಾಗ್ಯಶ್ರೀ ವ್ಯತಿರಿಕ್ತ ಹೇಳಿಕೆ ಕೊಟ್ಟಿದ್ದರು. ಮೃತನ ತಾಯಿ ನೀಡಿದ ದೂರಿನ ಅನ್ವಯ ತನಿಖೆ ನಡೆಸಿದಾಗ ಜೈಭೀಮ ಮತ್ತು ದತ್ತಾತ್ರೇಯನನ್ನು ಬಂಧಿಸಲಾಯಿತು. ವಿಚಾರಣೆಯಲ್ಲಿ ಜೈಭೀಮ ಮತ್ತು ಭಾಗ್ಯಶ್ರೀಗೆ ಅಕ್ರಮ ಸಂಬಂಧ ಇರುವುದು ಗೊತ್ತಾಗಿದೆ. ದತ್ತಾತ್ರೇಯ ಕೊಲೆಗೆ ಸಹಕರಿಸಿದ್ದು, ಕೊಲೆಯ ವೇಳೆ ಭಾಗ್ಯಶ್ರೀ ‍ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿಗಳು  ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಭಾಗ್ಯಶ್ರೀ
ಶರಣಪ್ಪ ಎಸ್‌.ಡಿ.
ಅನ್ಯಾಯಕ್ಕೆ ಒಳಗಾದವರು ಮುಂದೆ ಬಂದು ದೂರು ಕೊಡಬೇಕು. ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ವಿಳಂಬವಾದರೆ ನೇರವಾಗಿ ನನ್ನನ್ನು ಭೇಟಿ ಮಾಡಬಹುದು
ಶರಣಪ್ಪ ಎಸ್.ಡಿ. ಪೊಲೀಸ್ ಕಮಿಷನರ್

‘164 ಅಡಿ ಸಂತ್ರಸ್ತೆಯ ಹೇಳಿಕೆ ದಾಖಲು’

‘ಅತ್ಯಾಚಾರ ಹನಿಟ್ರ್ಯಾಪ್ ಪ್ರಕರಣದ ಸಂತ್ರಸ್ತ ಯುವತಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ 164 ಅಡಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ತಿಳಿಸಿದರು. ‘ಪ್ರಕರಣದಲ್ಲಿ ಬಂಧಿತರಾದ ಎಂಟು ಮಂದಿ ಆರೋಪಿಗಳಿಗೆ ಸೆಪ್ಟೆಂಬರ್ 21ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವೈಜ್ಞಾನಿಕ ಮತ್ತು ತಾಂತ್ರಿಕವಾಗಿ ಮಾಹಿತಿ ಕಲೆ ಹಾಕುತ್ತಿದ್ದೇವೆ. ಆದಷ್ಟು ಬೇಗ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆಗೆ ಒಳಪಡಿಸುತ್ತೇವೆ’ ಎಂದರು. ‘ಈಗಾಗಲೇ ಎಲ್ಲ ಆರೋಪಿಗಳ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮೊಬೈಲ್‌ಗಳಲ್ಲಿನ ವಿಡಿಯೊ ಇತರೆ ಡೇಟಾ ಪತ್ತೆಗಾಗಿ ಫೋರೆನ್ಸಿಕ್‌ ಲ್ಯಾಬ್‌ಗೆ ಕಳುಹಿಸಲಾಗುವುದು. ಇದುವರೆಗೂ ಲಭ್ಯವಾದ ಸಾಕ್ಷ್ಯಾಧಾರಗಳ ಮೇಲೆ ಈ ಪ್ರಕರಣದ ತನಿಖೆಯನ್ನು ಕಮಿಷನರೇಟ್‌ ವ್ಯಾಪ್ತಿಯ ಸೈಬರ್ ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯ ಎಸಿಪಿಗೆ ವರ್ಗಾಯಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.