ADVERTISEMENT

ಕೊಲೆ ಪ್ರಕರಣ: ಚಿತ್ತಾಪುರ ಪಿಎಸ್ಐ ಮಂಜುನಾಥ ರೆಡ್ಡಿ ಅಮಾನತು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 16:16 IST
Last Updated 15 ಡಿಸೆಂಬರ್ 2021, 16:16 IST
ಮಂಜುನಾಥ ರೆಡ್ಡಿ
ಮಂಜುನಾಥ ರೆಡ್ಡಿ   

ಚಿತ್ತಾಪುರ: ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಗಾಂಜಾ ಮಾರಾಟ ವಿಚಾರವಾಗಿ ನಡೆದ ಯುವಕನ ಕೊಲೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ್ದಕ್ಕಾಗಿ ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ ರೆಡ್ಡಿ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಗಾಂಜಾ ಸಂಬಂಧ ಯುವಕನ ಕೊಲೆ ಪ್ರಕರಣದ ಪರಿಶೀಲನೆಗೆಂದು ಕಳೆದ ಭಾನುವಾರ ಚಿತ್ತಾಪುರಕ್ಕೆ ಭೇಟಿ ನೀಡಿದ್ದ ಇಶಾ ಪಂತ್ ಅವರು ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಕಲೆ ಹಾಕಿದ್ದರು.

ಕೊಲೆ ಆರೋಪಿ ಸಲೀಂನಿಂದ ಗಾಂಜಾ ಮಾರಾಟದ ವಿವರ ಪಡೆದ ಅವರು ಸ್ಥಳೀಯ ಪೊಲೀಸರ ಕರ್ತವ್ಯ ಲೋಪದ ಬಗ್ಗೆ ಮಾಹಿತಿ ಪಡೆದು ಪೊಲೀಸರಿಗೆ ಬಿಸಿ ಮುಟ್ಟಿಸಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದಿಂದ ಗಾಂಜಾ ತಂದು ಚಿತ್ತಾಪುರದಲ್ಲಿ ಮಾರಾಟ ಮಾಡುತ್ತಿರುವ ವಿಷಯ ಕೊಲೆ ಆರೋಪಿ ಸಲೀಂ, ಎಸ್‌ಪಿ ಇಶಾ ಪಂತ್ ಅವರ ಮುಂದೆ ಬಾಯಿ ಬಿಟ್ಟಿದ್ದಾನೆ. ಗಾಂಜಾ ಸಂಬಂಧ ಸ್ಥಳೀಯ ಪೊಲೀಸರು ಮೊಬೈಲ್ ಮೂಲಕ ಮಾತನಾಡಿರುವ ವಿವರ, ಠಾಣೆಗೆ ಕರೆಸಿ ಮನೆಗೆ ಕಳಿಸಿರುವ ಕುರಿತು ವಿವರ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಗಾಂಜಾದಂತಹ ಕಾನೂನು ಬಾಹಿರ ಪದಾರ್ಥಗಳ ಕುರಿತು ಗಂಭೀರವಾಗಿ ಪರಿಗಣಿಸದೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿರುವ ಕೆಲವು ಪೊಲೀಸ್ ಸಿಬ್ಬಂದಿ ನೆತ್ತಿಯ ಮೇಲೆ ಕಾನೂನು ಕ್ರಮದ ತೂಗುಗತ್ತಿ ನೇತಾಡುತ್ತಿದೆ.

ಯಾವ ಪೊಲೀಸರು ಆರೋಪಿ ಸಲೀಂನೊಂದಿಗೆ ಮಾತನಾಡಿದ್ದಾರೆ. ಒಂದು ವರ್ಷದಲ್ಲಿ ಎಷ್ಟು ಸಲ ಕರೆ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ನಾಲ್ಕರಿಂದ ಆರು ಜನ ಸಿಬ್ಬಂದಿ ಸಲೀಂ ಜತೆ ಮೊಬೈಲ್ ಕರೆ ಮೂಲಕ ಮಾತನಾಡಿರುವ ಕುರಿತು ಎಸ್ಪಿ ಅವರಿಗೆ ಮಾಹಿತಿ ಇದೆ ಎಂದು ಗೊತ್ತಾಗಿದೆ.

ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಗಾಂಜಾ ಸಾಗಾಟ, ಮಾರಾಟ ತಡೆಯುವಂತೆ ನಿರ್ದೇಶನ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.