ಕಲಬುರ್ಗಿ: ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಅಗತ್ಯವಾಗಿದ್ದು, ವಿಜ್ಞಾನ ಅಧ್ಯಯನ ಮಾಡುವವರು ಇದನ್ನೇ ವೃತ್ತಿಯನ್ನಾಗಿ ಸ್ವೀಕರಿಸಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಸಲಹೆ ನೀಡಿದರು.
ಸರ್ ಸಿ.ವಿ.ರಾಮನ್ ಅವರ ಬೆಳಕಿನ ಕುರಿತಾದ ಸಂಶೋಧನೆಗಾಗಿ ನೊಬೆಲ್ ಪ್ರಶಸ್ತಿ ಬಂದ ಪ್ರಯುಕ್ತ ಆಚರಿಸಲಾಗುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ನಾನು ಸೂಕ್ಷ್ಮ ಜೀವವಿಜ್ಞಾನದ ಪ್ರಾಧ್ಯಾಪಕನಾದರೂ ನನ್ನ ವಿಷಯಕ್ಕೂ ಸಿ.ವಿ. ರಾಮನ್ ಅವರ ಭೌತವಿಜ್ಞಾನಕ್ಕೂ ನಿಕಟ ಸಂಬಂಧವಿದೆ. ವಿಜ್ಞಾನದ ವಿವಿಧ ಶಾಖೆಗಳನ್ನು ಒಂದಕ್ಕೊಂದು ಅಂತರ್ಗತವಾಗಿವೆ’ ಎಂದರು.
ಹುಟ್ಟು ಮತ್ತು ಸಾವಿನ ಮಧ್ಯೆ ನಮ್ಮ ಬದುಕನ್ನು ವಿಜ್ಞಾನದ ತಿಳಿವಳಿಕೆಯನ್ನು ಮಾನವ ಕಲ್ಯಾಣಕ್ಕೆ ಬಳಸಬೇಕು ಎಂದು ರಾಮನ್ ಅವರು ಹೇಳಿದ್ದರು. ಆ ನಿಟ್ಟಿನಲ್ಲಿ ನಾವೆಲ್ಲ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಸಸಿ ಮಾತನಾಡಿ, ‘ವಿಜ್ಞಾನವು ನಮ್ಮ ತಾಯಂದಿರು ಮಾಡುವ ಅಡುಗೆಯಿಂದಲೇ ಆರಂಭವಾಗುತ್ತದೆ. ಅನ್ನವನ್ನು ಕುಕ್ಕರ್ನಲ್ಲಿ ಇಟ್ಟಾಗ ಎಷ್ಟು ಸೀಟಿ ಹೊಡೆದ ಬಳಿಕ ಬೆಂದಿರುತ್ತದೆ. ಬೇಯುತ್ತಿರುವ ಮೊಟ್ಟೆ ಒಡೆಯದಂತೆ ಉಪ್ಪು ಸೇರಿಸಬೇಕು ಎಂಬುದೂ ವೈಜ್ಞಾನಿಕ ಆಧಾರದ ಮೇಲೆ ನಿರ್ಧಾರವಾಗುತ್ತದೆ’ ಎಂದರು.
’ಜನರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಜಿಲ್ಲಾ ಪಂಚಾಯಿತಿಯಿಂದ ವಿಜ್ಞಾನ ಕೇಂದ್ರಕ್ಕೆ ಅಗತ್ಯ ನೆರವು ನೀಡುತ್ತೇವೆ’ ಎಂದು ಭರವಸೆ ನೀಡಿದರು.
ವಿಜ್ಞಾನ ಕೇಂದ್ರದ ಮುಖ್ಯಸ್ಥ ಲಕ್ಷ್ಮಿನಾರಾಯಣ, ತಾಂತ್ರಿಕ ಅಧಿಕಾರಿ ಎಸ್.ಎನ್. ಮಿಸ್ಕಿನ್ ವೇದಿಕೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.