ಚಿಂಚೋಳಿ: ತಾಲ್ಲೂಕಿನ ಪೋಲಕಪಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಅವ್ಯವಹಾರದ ಸಮಗ್ರ ತನಿಖೆ ಸೇರಿದಂತೆ ವಿವಿಧ ಸಾಗರಿಕ ಸೌಲಭ್ಯಗಳು ಕಲ್ಪಿಸಲು ಒತ್ತಾಯಿಸಿ ಗ್ರಾಮದ ಬಿಜೆಪಿ ಮುಖಂಡ ನಂದಿಕುಮಾರ ಪಾಟೀಲ ನೇತೃತ್ವದಲ್ಲಿ ಗ್ರಾಮಸ್ಥರು 5 ದಿಗಳಿಂದ ಧರಣಿ ನಡೆಸುತ್ತಿದ್ದಾರೆ.
ನಂದಿಕುಮಾರ ಪಾಟೀಲ ಮಾತನಾಡಿ, ಗ್ರಾಮಕ್ಕೆ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಶಾಸಕ, ಸಂಸದರಿಗೆ ಪತ್ರ ಬರೆದಿದ್ದೇನೆ. ಆದರೆ ಇದುವರೆಗೂ ಸ್ಪಂದನೆ ದೊರೆತಿಲ್ಲ. ಸಂಸದ ಭಗವಂತ ಖೂಬಾ ಮೊದಲ ಪತ್ರಕ್ಕೆ ಸ್ಪಂದಿಸಿಲ್ಲ. ಮತ್ತೊಮ್ಮೆ ಬರೆದ ಪತ್ರಕ್ಕೆ ಸ್ಪಂದಿಸಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿದ್ದಾರೆ. ಆದರೆ ಇವರೆಗೂ ಯಾವೊಬ್ಬ ಅಧಿಕಾರಿಗಳು ಧರಣಿ ನಿರತರ ಸಮಸ್ಯೆ ಆಲಿಸಲು ಬಂದಿಲ್ಲ ಎಂದು ತಿಳಿಸಿದರು.
ಶುದ್ಧ ಕುಡಿವ ನೀರು, ರಸ್ತೆ ವಿಸ್ತರಣೆ, ಅತ್ಯಾಧುನಿಕ ಶೌಚಾಲಯ ನಿರ್ಮಾಣ, ಅಕ್ರಮ ಮರಳುಗಾರಿಕೆ ನಿಯಂತ್ರಣ, ಕೈಗಾರಿಕಾ ತರಬೇತಿ ಕೇಂದ್ರ ಹಾಗೂ ಆದರ್ಶ ವಿದ್ಯಾಲಯಗಳಿಗೆ ಮಕ್ಕಳು ತೆರಳಲು ಸುಸಜ್ಜಿತ ರಸ್ತೆ ನಿರ್ಮಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಧರಣಿ ಕೈಗೊಳ್ಳಲಾಗಿದೆ ಎಂದರು.
ಶಿಲ್ಪಾ ಹೊಸಮನಿ, ಬಸವರಾಜ ಪೋಲಕಪಳ್ಳಿ, ಸುರೇಶ ದೇಶ್ಪಾಂಡೆ, ಜಗದೀಶ ಗೌನೂರು, ಶಿವಕುಮಾರ ಗೌನೂರು, ರೇವಣಸಿದ್ದಪ್ಪ ಪೂಜಾರಿ, ಮಹೇಶ ವಾಲಿಕಾರ, ನಾಗೇಶ ಮೇತ್ರಿ, ನಿಂಗಮ್ಮ ಮೇತ್ರಿ, ಸೋಬಮ್ಮ ಮಟ್ಟಿ, ರೇಣುಕಾ ಮೇತ್ರಿ, ಲಕ್ಷ್ಮಿ ನಾಟಿಕಾರ, ಮುತ್ತಮ್ಮ ಬಡಿಗೇರ್ ಇದ್ದರು.
ಚುನಾವಣೆ ನೀತಿ ಸಂಹಿತೆ ಕಾರಣ ಚಿಂಚೋಳಿ ಠಾಣೆಯ ಸಬ್ ಇನಸ್ಪೆಕ್ಟರ್ ರಾಜಶೇಖರ ರಾಠೋಡ್ ಬಂದು ಮನವಿ ಮಾಡಿದ್ದರಿಂದ ಧರಣಿ ವಾಪಸ್ ಪಡೆದಿದ್ದಾಗಿ ನಂದಿಕುಮಾರ ಪಾಟೀಲ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.