ಕಲಬುರಗಿ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಶನಿವಾರ ನಗರದಲ್ಲಿ ನಡೆದ ಜಗಳದಲ್ಲಿ ಇಬ್ಬರ ಮೇಲೆ ಗುಂಡು ಹಾರಿಸಿ ಆರೋಪಿ ಪರಾರಿಯಾಗಿದ್ದಾನೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷ ಪಾಟೀಲ ದಣ್ಣೂರ ಅವರ ಸಹೋದರ ಚನ್ನವೀರ ಪಾಟೀಲ ಮತ್ತು ಅಬೂಬಕರ್ ಗಾಯಗೊಂಡವರು. ಬಸಯ್ಯ ಗುತ್ತೇದಾರ ಎಂಬಾತ ಗುಂಡಿನ ದಾಳಿ ನಡೆಸಿದ್ದಾನೆ.
‘ನಿವೇಶನಕ್ಕೆ ಸಂಬಂಧಿಸಿದಂತೆ ಪಾಟೀಲ ಮತ್ತು ಗುತ್ತೇದಾರ ಕುಟುಂ ಬದ ಮಧ್ಯೆ ವರ್ಷಗಳಿಂದ ವ್ಯಾಜ್ಯವಿತ್ತು. 2018ರಲ್ಲಿ ನ್ಯಾಯಾಲಯವು ನಿವೇಶನ ಸಂತೋಷ ಪಾಟೀಲಗೆ ಸೇರಿದೆ ಎಂದು ತೀರ್ಪು ನೀಡಿತು. ಆದರೆ, ಆರೋಪಿಗಳಾದ ಬಸಯ್ಯ ಗುತ್ತೇದಾರ, ದಸ್ತಯ್ಯ ಗುತ್ತೇದಾರ, ಶಾಂತಾಬಾಯಿ ಗುತ್ತೇದಾರ, ರಾಜು ಗುತ್ತೇದಾರ ಎಂಬುವರು ನಿವೇಶನ ತಮ್ಮದೆಂದು ಕಿರಿಕಿರಿ ಮಾಡುತ್ತಿದ್ದರು’ ಎಂದು ಚನ್ನವೀರ ಪಾಟೀಲ ದೂರು ನೀಡಿದ್ದರು.
‘ನಿವೇಶನದಲ್ಲಿ ಬಾಡಿಗೆಗೆ ನೀಡಿದ್ದ ಹೋಟೆಲ್ನ ಇಟ್ಟಿಗೆಗಳನ್ನು ಕೆಡವಲು ಬಸಯ್ಯ ಗುತ್ತೇದಾರ ಮತ್ತು ಅವರ ಕುಟುಂಬದವರು ಬಂದಿದ್ದಾರೆ. ಇದಕ್ಕೆ ಚನ್ನವೀರ ಆಕ್ಷೇಪಿಸಿದ್ದಾರೆ. ಆಗ ಜಗಳ ಆರಂಭವಾಗಿದೆ. ಬಸಯ್ಯ ಪಿಸ್ತೂಲ್ನಿಂದ ಮೂರು ಸುತ್ತು ಗುಂಡು ಹಾರಿಸಿದರು. ಒಂದು ಗುಂಡು ಗಾಳಿಯಲ್ಲಿ ಹಾರಿತು. ಒಂದು ಗುಂಡು ಚನ್ನವೀರ ಬಲಗೈಗೆ ಮತ್ತು ಇನ್ನೊಂದು ಗುಂಡು ಜಗಳ ನೋಡಲು ನಿಂತಿದ್ದ ಅಬೂಬಕರ್ ಕಾಲಿಗೆ ತಾಗಿದೆ. ಆರೋಪಿಯ ಬಂಧನಕ್ಕೆ ಕಾರ್ಯಾ ಚರಣೆ ನಡೆಸಿದ್ದೇವೆ’ ಎಂದು ಡಿಸಿಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.