ಅಫಜಲಪುರ: ಕಳೆದ ಒಂದು ವಾರದಿಂದ ಸುರಿದ ನಿರಂತರ ಮಳೆಯಿಂದಾಗಿ ಬೋರಿಹಳ್ಳ ತುಂಬಿದ್ದು, ಜೇವರ್ಗಿ(ಬಿ), ಜೇವರ್ಗಿ (ಕೆ) ಎರಡು ಗ್ರಾಮಗಳ ಮಧ್ಯೆ ಸಂಪರ್ಕ ಕಡಿತವಾಗಿದೆ. ಮಹಾರಾಷ್ಟ್ರದ ದುಧನಿ ನಗರಕ್ಕೆ ಸಂಚರಿಸುವ ರಸ್ತೆಯು ಸ್ಥಗಿತವಾಗಿದೆ.
ನಿರಂತರ ಮಳೆ ಹಾಗೂ ರಸ್ತೆ ಸಂಪರ್ಕ ಕಡಿತದಿಂದ ಬುಧವಾರ ಶಾಲೆಗೆ ರಜೆ ನೀಡಲಾಗಿತ್ತು. ಮಾಶಾಳ ಗ್ರಾಮಕ್ಕೆ ಸಂಚರಿಸುವ ರಸ್ತೆ ಸಂಚಾರ ಕೂಡ ಸ್ಥಗಿತವಾಗಿದೆ.
ನಿರಂತರ ಮಳೆಯಿಂದ ಸೇತುವೆ ಸಂಪೂರ್ಣ ಮುಳಗಿದೆ. ಇದರಿಂದ ಮಾಶಾಳ ಗ್ರಾಮ ಹಾಗೂ ಮಹಾರಾಷ್ಟ್ರದ ದುಧನಿ ನಗರಕ್ಕೆ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಬೆಳೆಗಳು ಹಾಳಾಗುತ್ತಿವೆ ಎಂದು ಗ್ರಾಮದ ಮುಖಂಡರಾದ ಗುರುಶಾಂತ್ ಮರಡಿ, ಗಿರೀಶ್ ದೇಸಾಯಿ, ಸುಭಾಷ್ ದೇಸಾಯಿ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಮನ್ವಯ ಅಧಿಕಾರಿ ಬಿ.ವೈ ಗುಡುಮಿ ಮಾತನಾಡಿ, ಜೇವರ್ಗಿ (ಬಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಬೋರಿಹಳ್ಳದಿಂದ ರಸ್ತೆ ಸಂಚಾರ ಸ್ಥಗಿತವಾಗಿದೆ. ಅದಕ್ಕಾಗಿ ಬುಧವಾರ ಶಾಲೆಗೆ ರಜೆ ನೀಡಲಾಗಿತ್ತು. ಬದಲಾಗಿ ಭಾನುವಾರ ಶಾಲೆ ನಡೆಸಲು ತಿಳಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.