ಜೇವರ್ಗಿ: ಪಟ್ಟಣದ 17ನೇ ಶತಮಾನದ ಶ್ರೇಷ್ಠ ವಚನಕಾರ ಚರಚಕ್ರವರ್ತಿ ಷಣ್ಮುಖ ಶಿವಯೋಗಿಗಳ ಜಾತ್ರಾ ಮಹೋತ್ಸವದ ನಿಮಿತ್ತ ಶನಿವಾರ ಅದ್ದೂರಿ ರಥೋತ್ಸವ ಜರುಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ವಿರಕ್ತ ಮಠದ ಟ್ರಸ್ಟ್ ಕಮಿಟಿ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಮಠದ ಆವರಣದಲ್ಲಿ ಮೇ 2ರಿಂದ ಗದಗ ಚುರ್ಚಿಹಾಳ ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಶಾಸ್ತ್ರಿ ಹಿರೇಮಠ ಅವರಿಂದ ಪುರಾಣ ಕಾರ್ಯಕ್ರಮ ನಡೆಯಿತು. ಶುಕ್ರವಾರ ಪುರಾಣ ಮಹಾಮಂಗಲಗೊಂಡು, ನಂತರ ಲಘು ಉಚ್ಚಾಯ ಉತ್ಸವ ನಡೆಯಿತು.
ಶನಿವಾರ ಬೆಳಿಗ್ಗೆ 6 ಗಂಟೆಗೆ ಷಣ್ಮುಖ ಶಿವಯೋಗಿಗಳ ಕರ್ತೃ ಗದ್ದುಗೆಗೆ ಅರ್ಚಕ ಬಸಯ್ಯಸ್ವಾಮಿ ಹಿರೇಮಠ ಅವರಿಂದ ವಚನಾಭಿಷೇಕ, ಮಹಾಮಂಗಳಾರತಿ ನಡೆಯಿತು. ಬೆಳಿಗ್ಗೆ 10 ಗಂಟೆಗೆ ಶ್ರೀಮಠದಿಂದ ವಚನ ಸಾಹಿತ್ಯದ ಪಲ್ಲಕ್ಕಿ ಉತ್ಸವ ಆರಂಭಗೊಂಡು ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಮಧ್ಹಾಹ್ನ 3 ಗಂಟೆಗೆ ಶ್ರೀಮಠಕ್ಕೆ ಬಂದು ತಲುಪಿತು.
ಸಂಜೆ 6.30ಕ್ಕೆ ಪುರವಂತರ ಸೇವೆಯ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಷಣ್ಮುಖ ಶಿವಯೋಗಿ ಮಹಾರಾಜ ಕೀ ಜೈ ಎಂಬ ಜಯಘೋಷದೊಂದಿಗೆ ಸಂಭ್ರಮ ಸಡಗರದಿಂದ ಭಕ್ತರು ತೇರು ಎಳೆದರು. ರಥದ ಮೇಲೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತರು ಹರಕೆ ತೀರಿಸಿದರು.
ಜಾತ್ರಾ ನಿಮಿತ್ತ ಬಂದ ಭಕ್ತರಿಗೆ ಮಠದ ಆವರಣದಲ್ಲಿ ಪ್ರಸಾದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಜಶೇಖರ ಸಾಹು ಸೀರಿ, ಉಪಾಧ್ಯಕ್ಷ ಸೋಮಣ್ಣ ಕಲ್ಲಾ, ಬಸವರಾಜ ಹುಗ್ಗಿ, ಷಣ್ಮುಖಪ್ಪಗೌಡ ಹಿರೇಗೌಡ, ಸಂಗಣಗೌಡ ಪಾಟೀಲ ಗುಳ್ಯಾಳ, ಷಣ್ಮುಖಪ್ಪ ಸಾಹು ಗೋಗಿ, ಶರಣಬಸವ ಕಲ್ಲಾ, ನೀಲಕಂಠ ಅವಂಟಿ, ರವಿ ಕೋಳಕೂರ, ದಯಾನಂದ ದೇವರಮನಿ, ಮಲ್ಲಿಕಾರ್ಜುನ ಪಾಟೀಲ ಬಿರಾಳ, ಸಿದ್ದಣ್ಣಗೌಡ ಹಳಿಮನಿ, ಶಿವಾನಂದ ಮಠಪತಿ, ಅಖಂಡು ಶಿವಣ್ಣಿ, ಪಂಚಯ್ಯಸ್ವಾಮಿ ಮಠಪತಿ, ವಿಶ್ವನಾಥ ಇಮ್ಮಣ್ಣಿ, ದಂಡಪ್ಪಗೌಡ ಪೊಲೀಸ್ ಪಾಟೀಲ, ಗುರುಲಿಂಗಯ್ಯಸ್ವಾಮಿ ಯನಗುಂಟಿ, ಈರಯ್ಯಸ್ವಾಮಿ ಘಂಟಿಮಠ ಸೇರಿದಂತೆ ಸಹಸ್ರಾರು ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.