ಕಲಬುರಗಿ: ‘ಅಕ್ಷರ ದಾಸೋಹ, ಅನ್ನ ದಾಸೋಹದಲ್ಲಿ ದೇವರಿಗೆ ಸಮಾನ ಎನ್ನುವ ಹಂತಕ್ಕೆ ಶಿವಕುಮಾರ ಸ್ವಾಮೀಜಿ ಸೇವೆ ಸಲ್ಲಿಸಿದ್ದಾರೆ. ಅವರ ಹೆಸರಿನಲ್ಲಿ ಕಲಬುರಗಿಯಲ್ಲೂ ವಾಸ್ತುಶಿಲ್ಪ ಶಿಕ್ಷಣ ಕಾಲೇಜು ಆರಂಭಿಸಿದ್ದು ಅನುಕರಣೀಯ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹೇಳಿದರು.
ಇಲ್ಲಿನ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ, ಶ್ರೀ ಶಿವಕುಮಾರಸ್ವಾಮಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದತುಮಕೂರಿನ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕಲ್ಯಾಣ ಕರ್ನಾಟಕದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಹೆಸರದಲ್ಲಿ ಕಾಲೇಜು ಇರಲಿಲ್ಲ. ಆ ಕೊರತೆ ಎಚ್ಕೆಇ ಸಂಸ್ಥೆ ನೀಗಿಸಿದೆ. ಸಿದ್ಧಗಂಗೆಯ ಮಾದರಿಯಲ್ಲೇ ಕಲ್ಯಾಣ ಕರ್ನಾಟಕದಲ್ಲಿಯೂ ಶಿಕ್ಷಣ ದೊರೆಯುವಂತಾಗಲಿ’ ಎಂದರು.
ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಮಾತನಾಡಿ, ‘ಶಿವಕುಮಾರ ಸ್ವಾಮೀಜಿ ಅವರು ಜಾತಿ, ಧರ್ಮದ ಕಳಂಕವಿಲ್ಲದೆ ಬಡ, ಅರ್ಹತೆ ಇರುವ ಮಕ್ಕಳಿಗೆ ಶಿಕ್ಷಣ ದಾಸೋಹ ಮಾಡಿದರು’ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಡಾ.ಶರಣಬಸಪ್ಪ ಪಾಟೀಲ ಹರವಾಳ, ಕಾರ್ಯದರ್ಶಿ ಡಾ.ಜಗನ್ನಾಥ ಬಿಜಾಪುರೆ, ಕಾರ್ಯಕಾರಿ ಮಂಡಳಿ ಸದಸ್ಯರಾದ ಅರುಣಕುಮಾರ ಪಾಟೀಲ, ವಾಸ್ತುಶಿಲ್ಪಿ ಬಸವರಾಜ ಖಂಡೇರಾವ, ಸೋಮನಾಥ ನಿಗ್ಗುಡಗಿ, ಡಾ.ಅನೀಲ, ಸಾಯಿನಾಥ ಪಾಟೀಲ,ಸ್ಕೂಲ್ ಆಫ್ ಆರ್ಕಿಟೆಕ್ಚರ್’ನ ಪ್ರಾಚಾರ್ಯ ವಜ್ರಕುಮಾರ ಮೆಹ್ತಾ, ಪಿಡಿಎ ಕಾಲೇಜಿನ ಪ್ರಾಚಾರ್ಯ ಡಾ.ಶಶಿಧರ ಕಲಶೆಟ್ಟಿ, ಉಪ ಪ್ರಾಚಾರ್ಯ ಡಾ.ಸಿದ್ಧರಾಮ ಪಾಟೀಲ, ಡಾ.ಕಲ್ಪನಾ ವಾಂಜರಖೇಡ, ವಿಜಯಲಕ್ಷ್ಮಿ ಬಿರಾದಾರ, ಡಾ.ಬಾಬುರಾವ್ ಶೇರಿಕಾರ, ರವೀಂದ್ರ ಲಠ್ಠೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.