ADVERTISEMENT

ಶಾಲೆ ಕೊಠಡಿಯಲ್ಲೇ ವಿದ್ಯಾರ್ಥಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 4:01 IST
Last Updated 11 ಏಪ್ರಿಲ್ 2021, 4:01 IST
ಶೇಖ್ ಉಮರ್
ಶೇಖ್ ಉಮರ್   

ಕಲಬುರ್ಗಿ: ಇಲ್ಲಿನ ಎಂಎಸ್‌ಕೆ ಮಿಲ್‌ ಪದೇಶದ ಮದೀನಾ ಕಾಲೊನಿಯ ಆಯಿಶಾ ಶಾಲೆಯ ಕೊಠಡಿಯಲ್ಲಿಯೇ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ನೇಣು ಹಾಕಿಕೊಂಡು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.‌

ಶಹಾ ಜಿಲಾನಿ ಕಾಲೊನಿಯ ಶೇಖ್ ಮಹಿಬೂಬ್ ಅವರ ಮಗ ಶೇಖ್ ಉಮರ್ (16) ಸಾವಿಗೆ ಶರಣಾದವ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದಿಲ್ಲ. ಆದರೆ, ಸರಿಯಾಗಿ ಓದು ಎಂದು ಶುಕ್ರವಾರ ರಾತ್ರಿ ಪಾಲಕರು ಬೈದಿದ್ದರು. ಅದರಿಂದ ಮನನೊಂದು ಹೀಗೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಾವಿಗೆ ಶರಣಾಗುವ ಮುನ್ನ ವಿದ್ಯಾರ್ಥಿ ಕೊಠಡಿಯ ಬ್ಲ್ಯಾಕ್‌ಬೋರ್ಡ್‌ ಮೇಲೆ, ‘ಇಂದು ನನ್ನ ಕೊನೆಯ ದಿನವಾಗಿದೆ. ಇಂದು ನಾನು ಸಾಯುತ್ತೇನೆ. ನನ್ನ ಮೇಲೆತಂದೆ– ತಾಯಿ ಆಶೀರ್ವಾದ ಇರಲಿ’ ಎಂದು ಬರೆದಿದ್ದಾನೆ.

ADVERTISEMENT

ಶನಿವಾರ ಬೆಳಿಗ್ಗೆ 7.30ರ ಸುಮಾರಿಗೆ ಶಾಲೆಗೆ ಬಂದ ವಿದ್ಯಾರ್ಥಿ ಹಿಂಬಾಗಿಲಿನಿಂದ ಕೊಠಡಿ ಪ್ರವೇಶಿಸಿದ್ದಾನೆ. ಬೆಳಿಗ್ಗೆ 9.30ಕ್ಕೆ ಶಾಲಾ ಸಮಯಕ್ಕೆ ಸಿಬ್ಬಂದಿ ಬಂದು ಬಾಗಿಲು ತೆರೆದಾಗಲೇ ವಿಷಯ ಗೊತ್ತಾಗಿದೆ.

ಆತ್ಮಹತ್ಯೆ ಸುದ್ದಿ ತಿಳಿದು ಅಪಾರ ಸಂಖ್ಯೆಯ ಜನ ಶಾಲೆಯ ಸುತ್ತ ಸೇರಿದರು. ‘ನಮಗೆ ಯಾರ ಮೇಲೂ ಅನುಮಾನವಿಲ್ಲ. ಮರಣೋತ್ತರ ಪರೀಕ್ಷೆ ನಡೆಸುವುದು ಬೇಡ’ ಎಂದು ಆತನ ಪಾಲಕರೇ ಪೊಲೀಸರ ಮುಂದೆ ಮನವಿ ಮಾಡಿದರು. ಆದರೆ, ಕಾನೂನು ಪ್ರಕಾರ ಮರಣೋತ್ತರ ಪರೀಕ್ಷೆ ನಡೆಸಲೇಬೇಕು ಎಂದು ಮನವರಿಕೆ ಮಾಡಿದ ಪೊಲೀಸರು ಶವವನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು.

ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.