ಕಲಬುರ್ಗಿ: ಶರಣರ ನಾಡಾದ ಕಲಬುರ್ಗಿ ನೆಲದಲ್ಲಿ ನಿಂತು ಹೇಳುತ್ತಿದ್ದೇನೆ, ಶರಬಸವೇಶ್ವರರ ಪಾದದ ಮೇಲೆಆಣೆ ಮಾಡಿ ಹೇಳುತ್ತಿದ್ದೇನೆ ಈ ದೇಶದ ಒಬ್ಬ ನಾಗರಿಕನ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ ಎಂದು ಬಿಜೆಪಿ ಮುಖಂಡ ಎನ್.ರವಿಕುಮಾರ ಹೇಳಿದರು.
ಇಲ್ಲಿನ ಜಗಯತ್ ವೃತ್ತದಲ್ಲಿ ಕಿಕ್ಕಿರಿದು ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಮೋದಿ ಅವರಿಂದ ಒಬ್ಬನೇ ಒಬ್ಬ ಮುಸ್ಲಿಮನಿಗೂ ಅನ್ಯಾಯ ಆಗಿಲ್ಲ. ಆಗಲು ಅವರು ಬಿಡುವುದಿಲ್ಲ. ಪಕ್ಕದ ಮುಸ್ಲಿಂ ರಾಷ್ಟ್ರಗಳಲ್ಲಿ ದೌರ್ಜನ್ಯ ಅನುಭವಿಸಿದವರಿಗೆ ಆಶ್ರಯ ಕೊಡುವುದು ಅಸಾಂವಿಧಾನಿಕ ಹೇಗಾಗುತ್ತದೆ? ಇದು ಜಾತ್ಯಾತೀಯ ನಿಲುವೇ ಅಲ್ಲವೇನು? ಕಾಂಗ್ರೆಸಿಗರ ಸುಳ್ಳಿಗೆ ಇಷ್ಟು ವರ್ಷ ಮರುಳಾಗಿದ್ದೀರಿ. ಈಗಲಾದರೂ ಅರ್ಥ ಮಾಡಿಕೊಳ್ಳಿ...' ಎಂದರು.
'ಸುಪ್ರೀಂಕೋರ್ಟ್ ಆದೇಶಿಸಿದ ಎನ್ಆರ್ಸಿ ಬಗ್ಗೆಯೇ ವಿರೋಧ ಮಾಡುವವರೇ ನಿಮಗೆ ಸಂವಿಧಾನದ ಬಗ್ಗೆ ಮಾತನಾಡುವ ಹಕ್ಕಿದೆಯೇ?ಉಟ್ಟ ಬಟ್ಟೆಯಲ್ಲೇ ಇಟಲಿಯಿಂದ ಬಂದ ಸೋನಿಯಾ ಗಾಂಧಿ ಅವರೇ ನಿಮಗೆ ಭಾರತ ಪೌರತ್ವ ಕೊಟ್ಟಿಲ್ಲವೇ, ದಲೈ ಲಾಮಾ ಅವರಿಗೆ ಕೊಟ್ಟಿಲ್ಲವೇ' ಎಂದು ಪ್ರಶ್ನೆ ಹಾಕಿದರು.
ಮಾಲೀಕಯ್ಯ ಗುತ್ತೇದಾರ ಮಾತನಾಡಿ, 'ಇಂದು ಲಕ್ಷಾಂತರ ಜನ ಸ್ವಯಂ ಪ್ರೇರಣೆಯಿಂದ ಸೇರಿದ್ದಾರೆ. ಇದು ಟ್ರೈಲರ್ ಮಾತ್ರ, ಕಾಂಗ್ರೆಸ್ಗೆ ಪಿಚ್ಚರ್ ಅಭಿ ಬಾಕಿ ಹೈ..' ಎಂದು ಮೂದಲಿಸಿದರು.
ಸಂಸದ ಡಾ.ಉಮೇಶ ಜಾಧವ, ಶಾಸಕರಾದ ಸುಭಾಷ ಗುತ್ತೇದಾರ ಸೇರಿದಂತ ರಾಜಕೀಯ ಮುಖಂಡರು ಹಾಗೂ ಜಿಲ್ಲೆಯ ವಿವಿಧ ಮಠಾಧೀಶರೂ ನೇತೃತ್ವ ವಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.