ADVERTISEMENT

ಬಾಬರಿ ಮಸೀದಿ ಧ್ವಂಸ; ತೀರ್ಪು ಸಮಂಜಸ: ಯಾಗ ಮಾಧ್ವ ಮಠದ ಪೀಠಾಧಿಪತಿ

ಪ್ರಯಾಗ ಮಾಧ್ವ ಮಠದ ಪೀಠಾಧಿಪತಿ ವಿದ್ಯಾತ್ಮತೀರ್ಥ ಶ್ರೀ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 3:33 IST
Last Updated 7 ಅಕ್ಟೋಬರ್ 2020, 3:33 IST
ವಿದ್ಯಾತ್ಮತೀರ್ಥ ಶ್ರೀಪಾದಂಗಳವರು
ವಿದ್ಯಾತ್ಮತೀರ್ಥ ಶ್ರೀಪಾದಂಗಳವರು   

ಕಲಬುರ್ಗಿ: ‘ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಧ್ವಂಸ ಕೃತ್ಯವು ಪೂರ್ವನಿಯೋಜಿತ ಅಲ್ಲ ಎಂದು ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಸಮಂಜಸವಾಗಿದೆ. ಘಟನೆ ಸಂದರ್ಭದಲ್ಲಿ ಸೇರಿದ ಕರಸೇವಕರಲ್ಲಿ ಮಸೀದಿ ಧ್ವಂಸಗೊಳಿಸುವ ಉದ್ದೇಶ ಇರಲಿಲ್ಲ. ಇದೇ ಸತ್ಯ’ ಎಂದುಪ್ರಯಾಗ ಮಾಧ್ವ ಮಠದ ಪೀಠಾಧಿಪತಿ ವಿದ್ಯಾತ್ಮತೀರ್ಥ ಶ್ರೀಪಾದಂಗಳವರುಹೇಳಿದರು.

ಅಧಿಕ ಮಾಸದ ಉಪನ್ಯಾಸ ನೀಡಲು ನಗರದಲ್ಲಿ ನೆಲೆಸಿರುವ ಅವರು,ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದರು.

‘1992ರ ಡಿಸೆಂಬರ್ 6ರಂದು ಸೇರಿದ್ದ ಸಾವಿರಾರು ಕರಸೇವಕರ ಪೈಕಿ ಯಾರೊಬ್ಬರ ತಲೆಯಲ್ಲೂ ಮಸೀದಿ ಧ್ವಂಸಗೊಳಿಸಬೇಕೆಂಬ ಉದ್ದೇಶವಿರಲಿಲ್ಲ. ದೈವಿಶಕ್ತಿಯ ಸಂಕಲ್ಪದಂತೆಯೇ ಧ್ವಂಸವಾಯಿತು. ಈಗ ಆ ತೀರ್ಪಿನ ಬಗ್ಗೆ ವಿಶ್ಲೇಷಣೆ ಮಾಡುವ ಅಗತ್ಯವೇ ಇಲ್ಲ’ ಎಂದರು.

ADVERTISEMENT

‘ಕೆಲ ಶಕ್ತಿಗಳು ಈ ಸತ್ಯವನ್ನು ಮರೆಮಾಚುತ್ತ ಜನರನ್ನು ತಪ್ಪುದಾರಿಗೆ ಎಳೆಯುತ್ತಿವೆ. ಕೆಲವು ಮಾಧ್ಯಮಗಳು ಕೂಡ ಸತ್ಯಾನ್ವೇಷಣೆ ಮಾಡದೆಯೇ ಪೂರ್ವಗ್ರಹ ಪೀಡಿತವಾಗಿ ದುರುದ್ದೇಶದಿಂದ ಸುಳ್ಳು ಸಂಗತಿಗಳನ್ನು ಹರಿಯಬಿಡುತ್ತಿವೆ. ಮಾಧ್ಯಮಗಳು ಸತ್ಯದ ಬೆನ್ನು ಹತ್ತಿ ವರದಿ ಮಂಡಿಸುವುದು ಸಮಾಜಕ್ಕೆ ಒಳಿತು’ ಎಂದರು.

‘ಎಲ್ಲ ಸಂದರ್ಭಗಳಲ್ಲೂ ನಾವು ಕಂಡಿದ್ದೇ ಸತ್ಯ ಆಗಿರುವುದಿಲ್ಲ. ಹಾಗಾಗಿ, ಕಣ್ಣ ಮುಂದೆ ನಡೆದಿದ್ದನ್ನೂ ಪ್ರಮಾಣಿಸಿ ನೋಡಬೇಕು ಎಂಬ ಮಾತಿದೆ. ಹಾಗೆಯೇ ಸಮಾಜ, ರಾಷ್ಟ್ರದ ಸ್ವಾಸ್ಥ್ಯದ ಬಗ್ಗೆಯೂ ಕಾಳಜಿ ಹೊಂದಿರಬೇಕು’ ಎಂದೂ ಅವರು ಹೇಳಿದರು.‌

‘ಮನುಷ್ಯನಲ್ಲಿನ ಶ್ರದ್ಧೆ, ನಂಬಿಕೆಯಿಂದಲೇ ಎಲ್ಲ ಕಾರ್ಯಗಳು ಯಶಸ್ವಿಯಾಗುತ್ತವೆ. ಯಾರಲ್ಲಿ ಶ್ರದ್ಧೆ ಬಲವಾಗಿರುತ್ತದೆಯೋ ಅವರ ಆತ್ಮಬಲವೂ ವೃದ್ಧಿಸುತ್ತದೆ. ಇಂಥ ಆತ್ಮಬಲದಿಂದಲೇ ನಾವು ಕೊರೊನಾದಂತಹಸೋಂಕು ಗೆಲ್ಲಬಹುದು. ದೀಪ ಹಚ್ಚುವುದರಿಂದಾಗಲೀ, ಚಪ್ಪಾಳೆ ತಟ್ಟುವುದರಿಂದಾಗಲೀ ಕೊರೊನಾ ಹೋಗುವುದಿಲ್ಲ. ಆದರೆ, ಈ ಪ್ರಕ್ರಿಯೆಗಳು ನಮ್ಮ ಆತ್ಮಬಲ ವೃದ್ಧಿಸುತ್ತವೆ’ ಎಂದು ಶ್ರೀಪಾದಂಗಳವರು ತಿಳಿಸಿದರು.

ಜಯತೀರ್ಥ ವಿದ್ಯಾರ್ಥಿ ನಿಲಯದ ವ್ಯವಸ್ಥಾಪಕ ವಿದ್ಯಾಸಾಗರ ಕುಲಕರ್ಣಿ ರೇವೂರ, ಕಾರ್ಯದರ್ಶಿ ನವಲಿ ಕೃಷ್ಣಾಚಾರ್ಯ, ಭರತಕುಮಾರ ಕುಲಕರ್ಣಿ, ಅಶುತೋಷ ಕುಲಕರ್ಣಿ ರೇವೂರ, ಅನಿರುದ್ಧ ಕುಲಕರ್ಣಿ ರೇವೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.