ಕಲಬುರಗಿ: ‘ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ’ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏ.11ರಂದು ಬೆಳಿಗ್ಗೆ 10.45ಗಂಟೆಗೆ ನಗರದ ಎಸ್ಟಿಬಿಟಿ ಕ್ರಾಸ್ ಸಮೀಪದಲ್ಲಿರುವ ನಾಗಾಂಬಿಕಾ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ಭೀಮ ಜ್ಞಾನ ಯಾನ’ ಘೋಷವಾಕ್ಯದಡಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ’ ಎಂದರು.
‘ಪತ್ರಕರ್ತ ಮಹೇಶ ಕುಲಕರ್ಣಿ ಉದ್ಘಾಟಿಸಲಿದ್ದಾರೆ. ಕಾಲೇಜಿನ ಪ್ರಾಚಾರ್ಯ ಅರವಿಂದಕುಮಾರ ಬಿರಾದಾರ ಅಧ್ಯಕ್ಷತೆ ವಹಿಸುವರು. ಮಹಿಳಾ ಏಳ್ಗೆ- ಅಂಬೇಡ್ಕರ್ ಚಿಂತನೆ ಕುರಿತು ಜಯದೇವಿ ಗಾಯಕವಾಡ, ಸಾಮಾಜಿಕ ಸಮಾನತೆ- ಅಂಬೇಡ್ಕರ್ ಧೋರಣೆ ಕುರಿತು ಜಗನ್ನಾಥ ಎಲ್. ತರನಳ್ಳಿ, ಸಂವಿಧಾನ ತತ್ವ- ಶರಣ ತತ್ವ ಕುರಿತು ಪ್ರೊ. ಸಂಜಯ ಮಾಕಲ್ ಅವರು ವಿಚಾರ ಮಂಡನೆ ಮಾಡಲಿದ್ದಾರೆ’ ಎಂದು ಹೇಳಿದರು.
‘13ರಂದು ಬೆಳಿಗ್ಗೆ 11.15 ಗಂಟೆಗೆ ಕನ್ನಡ ಭವನದಲ್ಲಿ ‘ಭೀಮ ಕಾವ್ಯ ಜ್ಞಾನ’ ಎಂಬ ವಿಶೇಷ ಕವಿಗೋಷ್ಠಿ ಆಯೋಜಿಸಲಾಗಿದ್ದು, ಸಾಹಿತಿ ಹನುಮಂತರಾವ ಬಿ. ದೊಡ್ಡಮನಿ ಉದ್ಘಾಟಿಸುವರು. ಲೇಖಕ ಈಶ್ವರ ಕಟ್ಟಿಮನಿ ಅಧ್ಯಕ್ಷತೆ ವಹಿಸಲಿದ್ದಾರೆ. ವೀರಶೈವ ಲಿಂಗಾಯತ ಮಹಾವೇದಿಕೆಯ ಜಿಲ್ಲಾಧ್ಯಕ್ಷ ಶ್ರೀಧರ ಎಂ. ನಾಗನಹಳ್ಳಿ ಸೇರಿ ಇತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಜಿಲ್ಲೆಯ ಇಪ್ಪತೈದು ಕವಿಗಳು ಪ್ರಚಲಿತ ವಿದ್ಯಮಾನಗಳ ಮೇಲೆ ಕವನ ವಾಚಿಸಲಿದ್ದಾರೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್.ಧನ್ನಿ, ರಾಜೇಂದ್ರ ಮಾಡಬೂಳ, ಎಂ.ಎನ್. ಸುಗಂಧಿ, ಸಂತೋಷ ಕುಡಳಿ, ರಮೇಶ ಡಿ. ಬಡಿಗೇರ, ಧರ್ಮರಾಜ ಜವಳಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.