ಆಳಂದ (ಕಲಬುರಗಿ ಜಿಲ್ಲೆ): ಪಟ್ಟಣದ ಹೊರವಲಯದಲ್ಲಿನ ಮಳೆ ನೀರಿನ ಹೊಂಡದಲ್ಲಿ ಗುರುವಾರ ಈಜಲು ಹೋಗಿದ್ದ ಹೆಬಳಿ ರಸ್ತೆ ನ್ಯೂ ಬಾಳೇನಕೇರಿಯ ಇಬ್ಬರು ಶಾಲಾ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಶ್ರೀಶೈಲ ಲಕ್ಷ್ಮಣ ಹೀರಾಪುರ (13), ಲಕ್ಷ್ಮಿಕಾಂತ ಗುಂಡಪ್ಪ ಮಡಿವಾಳ (12) ಮೃತಪಟ್ಟ ವಿದ್ಯಾರ್ಥಿಗಳು. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದರು. ಮಳೆ ನೀರಿನಿಂದ ಭರ್ತಿಯಾಗಿದ್ದ ಹೊಂಡದಲ್ಲಿ ಈಜಲು ಇಳಿದಿದ್ದಾರೆ. ಹೊಂಡದಲ್ಲಿ ನೀರು ಹೆಚ್ಚಿದ್ದಿದ್ದರಿಂದ ವಿದ್ಯಾರ್ಥಿಗಳು ಸರಿಯಾಗಿ ಈಜು ಬಾರದೇ ನೀರಿನಲ್ಲಿ ಮುಳಗಿದ್ದಾರೆ. ಬಾಲಕರ ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಪಾಲಕರು, ಸುತ್ತಲಿನ ನಿವಾಸಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಶಿಕ್ಷಣ ಇಲಾಖೆಯ ಮಕ್ಕಳ ಕಲ್ಯಾಣ ನಿಧಿಯಿಂದ ದೊರೆಯುವ ಪರಿಹಾರದ ನೆರವು ಒದಗಿಸಲಾಗುವದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮುಡಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.