ADVERTISEMENT

ಕಲಬುರಗಿ: ಜಿಎಸ್ಟಿಯಿಂದ ವಿನಾಯಿತಿ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 3:05 IST
Last Updated 26 ಜನವರಿ 2022, 3:05 IST
ಚಂದ್ರಶೇಖರ ತಳ್ಳಳ್ಳಿ
ಚಂದ್ರಶೇಖರ ತಳ್ಳಳ್ಳಿ   

ಕಲಬುರಗಿ: ಕೃಷಿ ಪರಿಕರ ಮಾರಾಟಗಾರರ ಸಂಘವು ಮಾರಾಟ ಮಾಡುವ ಕೀಟನಾಶಕಕ್ಕೆ ಶೇ 18, ಲಘು ಪೋಷಕಾಂಶಗಳಿಗೆ ಶೇ 12 ಹಾಗೂ ರಸಗೊಬ್ಬರಕ್ಕೆ ಶೇ 5ರಷ್ಟು ಜಿಎಸ್ಟಿ ತೆರಿಗೆಯನ್ನು ವಿಧಿಸಲಾಗುತ್ತದೆ. ಇದ್ನನು ರೈತರೇ ಭರಿಸಬೇಕಾಗಿದ್ದರಿಂದ ಅವರಿಗೆ ಹೊರೆಯಾಗುತ್ತದೆ. ಆದ್ದರಿಂದ ತೆರಿಗೆ ವಿನಾಯಿತಿ ನೀಡಬೇಕು ಎಂದು ಕಲಬುರಗಿ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಚಂದ್ರಶೇಖರ ತಳ್ಳಳ್ಳಿ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆ. ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ಕೃಷಿ ಪರಿಕರಗಳ ಮಾರಾಟಗಾರರ ಪಾತ್ರ ಬಹು ಮುಖ್ಯವಾಗಿದೆ. ತೆರಿಗೆ ವಿನಾಯಿತಿಯನ್ನು ನೀಡಿದರೆ ರೈತರ ಆದಾಯ 2023ಕ್ಕೆ ದ್ವಿಗುಣಗೊಳಿಸಲು ಸಹಾಯಕವಾಗುತ್ತದೆ’ ಎಂದು ಹೇಳಿದರು.

ಕೋವಿಡ್‌ ಲಾಕ್‌ಡೌನ್‌ ಹಾಗೂ ಅತಿವೃಷ್ಟಿಯಿಂದಾಗಿ ರೈತರ ಫಸಲು ಕೈಗೆ ಬರದೇ ಸಂಪೂರ್ಣ ನಷ್ಟದಲ್ಲಿದ್ದಾರೆ. ಹೀಗಾಗಿ, ರೈತರಿಗೆ ಕೃಷಿ ಪರಿಕರ ಮಾರಾಟಗಾರರು ನೀಡಿದ ಸಾಲ ವಸೂಲಾಗಿಲ್ಲ. ಇದರಿಂದ ಮಾರಾಟಗಾರರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸರ್ಕಾರಿಗೆ ಇವರಿಗೆ ಯಾವುದೇ ತರಹದ ಸಹಾಯ ಮಾಡಿಲ್ಲ. ಯಾವುದೇ ಭದ್ರತೆ ಇಲ್ಲದೇ ರೈತರಿಗೆ ಮಿನಿ ಹಣಕಾಸು ಸಂಸ್ಥೆಯಂತೆ ನಾವು ಸಾಲ ಸೌಲಭ್ಯವನ್ನು ಕೊಡುತ್ತೇವೆ. ಆದರೆ, ಇಂದಿನ ದಿನಗಳಲ್ಲಿ ಬ್ಯಾಂಕಿನವರು ಮತ್ತು ಕಂಪನಿಯವರ ನಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ದಾಖಲೆಗಳನ್ನು ಅಡವಿಟ್ಟುಕೊಂಡಿದ್ದಾರೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿವೆ ಮತ್ತು ಸಂಕಷ್ಟದಲ್ಲಿರುವ ವ್ಯಾಪಾರಿಗಳಿಗೆ ಪರಿಹಾರ ಒದಗಿಸಬೇಕು ಎಂದರು.

ADVERTISEMENT

ಕೇಂದ್ರ ಸರ್ಕಾರವು ಕೃಷಿ ಪರಿಕರಗಳ ಮೇಲೆ ಹೊಸ ಕಾಯ್ದೆ, ನಿಯಮಗಳನ್ನು ಕಾಲಕಾಲಕ್ಕೆ ಜಾರಿಗೊಳಿಸುತ್ತಿದ್ದಾರೆ. ಇದರಿಂದ ಕೃಷಿ ಮಾರಾಟಗಾರರಿಗೆ ತೊಂದರೆಯಾಗುತ್ತಿದೆ. ಯಾವುದೇ ಕೃಷಿ ಪರಿಕರ ಕಳಪೆ ಮಟ್ಟದ್ದೆಂದು ಗುಣನಿಯಂತ್ರಣ ದೃಢಪಡಿಸಿದರೆ ಮೊದಲೇ ಆರೋಪಿಯನ್ನಾಗಿ ಮಾರಾಟಗಾರನನ್ನಾಗಿ ಪರಿಗಣಿಸುತ್ತಿದ್ದಾರೆ. ನಾವು ಯಾವುದೇ ಕೃಷಿ ಪರಿಕರಗಳನ್ನು ಮಾರ್ಪಾಡು ಮಾಡದೇ ಕಂಪನಿಯವರು ತಯಾರಿಸಿದ ಪ್ಯಾಕಿಂಗ್‌ನಲ್ಲಿ ಮಾರಾಟ ಮಾಡುತ್ತೇವೆ. ಕೃಷಿ ಪರಿಕರ ತಯಾರಿಸಿದ ಕಂಪನಿಯವರೇ ಹೊಣೆಗಾರರಾಗುತ್ತರೆ. ಆದ್ದರಿಂದ ಮಾರಾಟಗಾರರನ್ನು ಸಾಕ್ಷಿ ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.