ಚಿಂಚೋಳಿ: ‘ಪ್ರಾಣಿ, ಪಕ್ಷಿಗಳಲ್ಲಿ ಆತ್ಮಹತ್ಯೆ ಇಲ್ಲ. ದೈಹಿಕ ಅಂಗವಿಕಲತೆಯಿಂದ ಬಳಲುವವರು ಹೋರಾಟ ನಡೆಸುತ್ತಾ ಬದುಕುತ್ತಿದ್ದಾರೆ. ಆದರೆ ಎಲ್ಲಾ ತಿಳಿದ, ದೈಹಿಕವಾಗಿ ಸದೃಢರಾದವರೇ ಒತ್ತಡದ ಜೀವನ ಶೈಲಿ ನಿಭಾಯಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒತ್ತಡದ ಜೀವನಕ್ಕೆ ಮುಕ್ತಿ ನೀಡಲು ಯೋಗ ರಹದಾರಿ’ ಎಂದು ಡಿವೈಎಸ್ಪಿ ಸಂಗಮನಾಥ ಹಿರೇಮಠ ತಿಳಿಸಿದರು.
ಪಟ್ಟಣದ ವೀರೇಂದ್ರ ಪಾಟೀಲ ಪಬ್ಲಿಕ್ ಶಾಲೆಯ ಆವರಣದಲ್ಲಿ ಶನಿವಾರ ಪತಂಜಲಿ ಯೋಗ ಸಮಿತಿ ಹಮ್ಮಿಕೊಂಡ 11ನೇ ವರ್ಷದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಮನೋಬಲ ಹೆಚ್ಚಿಸಿಕೊಳ್ಳಲು ಯೋಗ ಪ್ರಾಣಾಯಾಮ, ಮೂಲಾಧಾರ ಚಕ್ರಗಳು, ಧ್ಯಾನ ವರದಾನವಾಗಿವೆ’ ಎಂದರು.
ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿ, ‘ಯೋಗದಿಂದ ರೋಗ ಮುಕ್ತ ಜೀವನ ಸಾಧ್ಯವಿದೆ. ಪ್ರತಿಯೊಬ್ಬರೂ ನಿತ್ಯ ಯೋಗ ಮಾಡಬೇಕು’ ಎಂದರು.
ಪತಂಜಲಿ ಯೋಗ ಸಮಿತಿ ಅಧ್ಯಕ್ಷ ರವೀಂದ್ರ ದೇಗಲಮಡಿ ಮಾತನಾಡಿದರು. ಗ್ರೇಡ್-2 ತಹಶೀಲ್ದಾರ್ ವೆಂಕಟೇಶ ದುಗ್ಗನ್, ತಾ.ಪಂ.ಇಒ ಶಂಕರ ರಾಠೋಡ್, ಟಿಎಚ್ಒ ಡಾ.ಮಹಮದ್ ಗಫಾರ್, ಕಿಶನರಾವ್ ಕಾಟಾಪುರ, ಸಿದ್ಧಾರೂಢ ಹೊಕ್ಕುಂಡಿ, ವಿಜಯಕುಮಾರ ಚೇಂಗಟಿ, ಅಶೋಕ ಪಾಟೀಲ, ಕೆ.ಎಂ.ಬಾರಿ, ಅಮರ ಲೊಡ್ಡನೋರ, ಕಸ್ತೂರಬಾ ಶಾಲೆ, ವೀರೇಂದ್ರ ಪಾಟೀಲ ಪಿಯು ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.
ಪತಂಜಲಿ ಯೋಗ ಸಮಿತಿಯ ತಾಲ್ಲೂಕು ಪ್ರಭಾರಿ ಶ್ರೀನಿವಾಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣ ಪಂಚಾಳ ಸ್ವಾಗತಿಸಿದರು. ಸೂರ್ಯಕಾಂತ ಚಿಂಚೋಳಿ ನಿರೂಪಿಸಿದರು, ರೇವಣಸಿದ್ದ ಮೋಘಾ ವಂದಿಸಿದರು.
ಕಾನೂನು ಸೇವಾ ಸಮಿತಿ: ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ನ್ಯಾಯಾಧೀಶ ದತ್ತಕುಮಾರ ಜವಳಕರ್, ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ, ಅಪರ ಸರ್ಕಾರಿ ವಕೀಲರಾದ ಶ್ರೀನಿವಾಸ ಬಂಡಿ, ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಇದ್ದರು. ಯೋಗ ಶಿಕ್ಷಕ ಸುನೀಲ ಬಾವಿತಾಂಡಾ ಯೋಗ ಹೇಳಿಕೊಟ್ಟರು.
ಮರಪಳ್ಳಿ ಶಾಲೆ: ತಾಲ್ಲೂಕಿನ ಮರಪಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಶನಿವಾರ ನಡೆಯಿತು. ಶಿಕ್ಷಕ ಸದ್ಧಾಮ ಹುಸೇನ್ ಅವರು ಯೋಗ ಹೇಳಿಕೊಟ್ಟರು. ಶಿಕ್ಷಕರಾದ ಬಸವಣಪ್ಪ, ಮೈನುದ್ದಿನ್, ಪ್ರೇಮಸಿಂಗ್, ಶ್ರೀನಾಥ, ಪರಶುರಾಮ ಮೊದಲಾದವರು ಇದ್ದರು. ಮುಖ್ಯ ಶಿಕ್ಷಕ ರಘುನಾಥ ಪವಾರ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.