ADVERTISEMENT

ಅಂಗವಿಕಲ ಬಾಲಕನಿಗೆ ಗೃಹಬಂಧನ !

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2011, 6:15 IST
Last Updated 5 ನವೆಂಬರ್ 2011, 6:15 IST
ಅಂಗವಿಕಲ ಬಾಲಕನಿಗೆ ಗೃಹಬಂಧನ !
ಅಂಗವಿಕಲ ಬಾಲಕನಿಗೆ ಗೃಹಬಂಧನ !   

ಕುಶಾಲನಗರ :  ಅಂಗವಿಕಲ ಗಂಡು ಮಗನನ್ನು ಪ್ರತಿದಿನ ಗೃಹಬಂಧ ದಲ್ಲಿರಿಸುವ ಹೃದಯ ವಿದ್ರಾವಕ ಘಟನೆ ಉತ್ತರ ಕೊಡಗಿನ ಗುಡ್ಡೆಹೊಸೂರು ಬಳಿಯ ದೊಡ್ಡಬೆಟ್ಟಗೇರಿ ಎಂಬ ಗ್ರಾಮದಿಂದ ತಡವಾಗಿ ಬೆಳಕಿಗೆ ಬಂದಿದೆ.

ದೊಡ್ಡಬೆಟ್ಟಗೇರಿ ಗ್ರಾಮದ ಕೂಲಿ ಕಾರ್ಮಿಕರಾದ ರಮೇಶ ಮತ್ತು ದಿವ್ಯ ದಂಪತಿಯ 6 ವರ್ಷದ ಮಂಜುನಾಥ್ ಎಂಬ ಬಾಲಕನೇ ಕತ್ತಲ ಬದುಕಿನಲ್ಲಿ ದಿನತಳ್ಳುತ್ತಿರುವ ದುರ್ದೆವಿ.

ಎರಡು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗುವನ್ನು ಹೊಂದಿರುವ ರಮೇಶ ದಂಪತಿ ಪ್ರತಿನಿತ್ಯ ಕೂಲಿ ಕೆಲಸಕ್ಕೆ ತೆರಳುವಾಗ ಹುಟ್ಟಿನಿಂದಲೇ ನ್ಯೂನತೆ ಹೊಂದಿದ್ದ  ಮಗ ಮಂಜು ನಾಥನನ್ನು ಮನೆ ಒಳಗೆ  ಕೂಡಿಹಾಕಿ ಹಗ್ಗದಲ್ಲಿ ಕಾಲನ್ನು ಕಟ್ಟಿ ಮನೆಗೆ ಬೀಗಹಾಕಿ ತೆರಳುತ್ತಿದ್ದರು.  ಇಬ್ಬರು ಹೆಣ್ಣು ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ತೆರಳುತ್ತಿದ್ದು, ಮಂಜುನಾಥನನ್ನು ಮನೆಯಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದ ಹಿನ್ನಲೆಯಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿರುವ ಪೋಷಕರು ಈ ರೀತಿ ಮಾಡಿದ್ದಾರೆ ಎಂಬ ಅಂಶ ತಿಳಿದು ಬಂದಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಯ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ಸ್ಥಳೀಯ ಜನಪ್ರತಿನಿಧಿಗಳು, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು.

ತಕ್ಷಣ ಜಿಲ್ಲಾಡಳಿತ ಸ್ಪಂದಿಸಿ  ಬಾಲಕ ಮಂಜುನಾಥನಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.