ಸೋಮವಾರಪೇಟೆ: ತಾಲ್ಲೂಕಿನ ನೇರುಗಳಲೆ ಪಂಚಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಳ್ಳಬಟ್ಟಿ ತಯಾರಿಕೆ ಯಥೇಚ್ಚವಾಗಿ ನಡೆಯು ತ್ತಿದೆ. ಅಬಕಾರಿ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳು ತ್ತಿಲ್ಲ. ಇದರೊಂದಿಗೆ ಮದ್ಯದಂಗಡಿ ಹಾಗೂ ದಿನಸಿ ಅಂಗಡಿಗಳಲ್ಲಿ ಮಾರಾಟವಾಗುತ್ತಿರುವ ಮದ್ಯವನ್ನು ದುಬಾರಿ ಬೆಲೆಗೆ ಮಾರಾಟಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ನೇರುಗಳಲೆ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆಯು ಅಧ್ಯಕ್ಷೆ ಎಚ್.ಕೆ.ಉಷಾ ಅಧ್ಯಕ್ಷತೆಯಲ್ಲಿ ಅಲ್ಲಿನ ಸರಕಾರಿ ಸಂಯುಕ್ತ ಪೌಢಶಾಲಾ ಸಭಾಂಗಣದಲ್ಲಿ ನಡೆಯಿತು.
ಪಂಚಾಯಿತಿ ವ್ಯಾಪ್ತಿಯ ದಿನಸಿ ಅಂಗಡಿಗಳಲ್ಲೂ ಅಕ್ರಮ ಮದ್ಯಮಾರಾಟ ಮಾಡಲಾಗುತ್ತಿದೆ. ಇದರ ಬಗ್ಗೆ ಸಮಜಾಯಿಷಿ ನೀಡಬೇಕೆಂದು ಸಂಬಂದಿಸಿದ ಇಲಾಖಾಧಿಕಾರಿಗಳಲ್ಲಿ ಗ್ರಾಮಸ್ಥರು ಕೇಳಿದರು. ಅಂತಹ ದೂರುಗಳಿದ್ದಲ್ಲಿ 9449933225 ಅಥವಾ 9449597139 ಸಂಖ್ಯೆಗೆ ಕರೆ ಮಾಡುವಂತೆ ಸೂಚಿಸಿದರು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡುತ್ತೇವೆ ಎಂದು ಅಬಕಾರಿ ನಿರೀಕ್ಷಕ ರಘು ತಿಳಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಪಡಿತರ ವಸ್ತು ಕಾಳ ಸಂತೆಯಲ್ಲಿ ಅಧಿಕ ಬೆಲೆಗೆ ಮಾರಾಟವಾಗುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದರು.
ಪಡಿತರ ವ್ಯವಸ್ಥೆಯಲ್ಲಿ ಲೋಪ ಸರಿಪಡಿಸಿಲ್ಲ. ತಕ್ಷಣವೇ ಸರಿಪಡಿಸಬೇಕೆಂದು ಆಗ್ರಹಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಅಧಿಕಾರಿ, ಪಡಿತರ ಚೀಟಿ ಪಡೆಯಲು ಮನೆಯ ಆರ್.ಆರ್. ನಂಬರ್ ಮತ್ತು ಮನೆಯ ಸದಸ್ಯರ ಹೆಸರಿನ ಗುರುತಿನ ಚೀಟಿಯ ನಕಲು ಪ್ರತಿಯನ್ನು ನ್ಯಾಯಬೆಲೆ ಅಂಗಡಿಗೆ ನೀಡಬೇಕೆಂದು ಹೇಳಿದರು.
ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸೋಮವಾರಪೇಟೆಯ ಅಹಾರ ಉಪನಿರೀಕ್ಷಕರ ಮೊಬೈಲ್ ಸಂಖ್ಯೆ 869402528 ಕ್ಕೆ ಕರೆ ಮಾಡಿ ಮಾಹಿತಿಯನ್ನು ತಿಳಿದುಕೊಳ್ಳುವಂತೆ ಅಹಾರ ನಿರೀಕ್ಪಕ ರಾಜಣ್ಣ ಸಭೆಗೆ ಸೂಚಿಸಿದರು.
ಪಂಚಾಯಿತಿ ವ್ಯಾಪ್ತಿಯ ಅಬ್ಬೂರುಕಟ್ಟೆಯಲ್ಲಿ ಟಿ.ಸಿ ಸುಟ್ಟು ಹೋಗಿ ತಿಂಗಳುಗಳೇ ಕಳೆದರೂ ಸರಿಪಡಿಸದೇ ಇರುವ ಬಗ್ಗೆ ಗ್ರಾಮಸ್ಥರು ಸಭೆಯ ಗಮನಕ್ಕೆ ತಂದರು. ವಿದ್ಯುತ್ ತಂತಿಯ ಮೇಲಿನ ಕಾಡನ್ನು ಕಡಿಯದೆ ಬಿಟ್ಟಿರುವುದರಿಂದ ಮತ್ತು ಪದೇ ಪದೇ ವಿದ್ಯುತ್ ನಿಲುಗಡೆಯ ಬಗ್ಗೆ ಗ್ರಾಮಸ್ಥರು ಅಭಿಯಂತರರಿಂದ ವಿವಿರಣೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಭಿಯಂತರರು ಸಮಸ್ಯೆಗಳಿಗೆ ಸ್ಪಂದಿಸುವ ಬಗ್ಗೆ ಬರವಸೆ ನೀಡಿ, ಸಮಸ್ಯೆಗಳಿದ್ದಲ್ಲಿ 9449598612 ಕ್ಕೆ ಕರೆ ಮಾಡುವಂತೆ ಕೋರಿದರು.
ಸಭೆಯಲ್ಲಿ ವಿವಿಧ ಕಾಮಾಗಾರಿಗಳ ಪಟ್ಟಿಯನ್ನು ತಯಾರಿಸಲಾಯಿತು. ನಂತರ ಸರಕಾರ ಯೋಜನೆಗಳಿಗೆ ವಿವಿಧ ಫಲಾನುಭವಿ ಆಯ್ಕೆ ಮಾಡಲಾಯಿತು.
ಕೊಡಗು ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಶಿವಪ್ಪ ಮಾತನಾಡಿ, ನೇರು ಗಳಲೆ ಗ್ರಾಮ ಪಂಚಾಯಿಯಿ ವ್ಯಾಪ್ತಿಯ ನೇಗಳ್ಳೆ, ಕರ್ಕಳ್ಳಿ, ಮಸಗೋಡು ವಿಭಾಗಕ್ಕೆ ಪೈಪ್ ಲೈನ್ ಅಳವಡಿಕೆ, ತಣ್ಣೀರುಹಳ್ಳಕ್ಕೆ ಹೆಚ್ಚುವರಿ ನೀರಿನ ಸಂಗ್ರಹಕ್ಕೆ ತೊಟ್ಟಿ ಹಾಗೂ ಅರೆಯೂರು ಮತ್ತು ಯಲಕನೂರಿಗೆ 2 ಕೊಳವೆ ಬಾವಿ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯತ್ ನಿಂದ ಅನುಮೋದನೆಗೆ ಕಳುಹಿಸಿರುವುದಾಗಿ ತಿಳಿಸಿದರು
ಆದ್ಯತೆಯ ಮೇರೆಗೆ ತಾಲ್ಲೂಕು ಪಂಚಾಯಿತಿಯಿಂದ ರಸ್ತೆ, ಕುಡಿಯುವ ನೀರಿನ ಯೋಜನೆ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಬಿ.ಸೋಮಯ್ಯ ತಿಳಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಪುಷ್ಪ ಲಿಂಗರಾಜು, ಸದಸ್ಯರುಗಳಾದ ವನಜ, ಲೋಕೇಶ್, ಕಮಲಾ, ಲೋಕಾನಂದ, ಸುಕುಮಾರ, ಕವಿತಾಪ್ರಕಾಶ್, ಸೂರ್ಯಕುಮಾರ್, ಲಲಿತಾಚಂದ್ರಪ್ಪ, ಧರ್ಮಪ್ಪ, ರಾಧಾರವಿ, ನೋಡೆಲ್ ಅಧಿಕಾರಿಯಾಗಿ ಎ.ಸಿ.ಮಂಜು, ಪಂಚಾಯಿತಿ ಅಭಿವದ್ಧಿ ಅದಿಕಾರಿ ಚಂದ್ರೆಗೌಡ ಉಪಸ್ದಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.