ಮಡಿಕೇರಿ: ಕನ್ನಡ ಎಲ್ಲರ ತಾಯಿ ಭಾಷೆ. ಕೊಡವ ಕೊಂಕಣಿ, ತುಳು, ಅರೆಭಾಷೆ, ಬ್ಯಾರಿಭಾಷೆಗಳು ಒಟ್ಟಾಗಿ ಪರಸ್ಪರ ಹೊಂದಾಣಿಕೆಯಾದಾಗ ಅವುಗಳ ಜೊತೆ ಕನ್ನಡವೂ ಬೆಳೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಏರ್ಪಡಿಸಲಾಗಿದ್ದ ಆಹ್ವಾನಿತ ಕವಿಗಳ ಬಹುಭಾಷಾ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ಪರವಾದ ದೊಡ್ಡ ಸಂಘಟನೆ ರೂಪುಗೊಳ್ಳುತ್ತಿದೆ. ಯುವಕರಿಗೆ ಕಥೆ, ಕವನಗಳನ್ನು ಬರೆಯುವ ಸಾಹಿತ್ಯ ಕಮ್ಮಟಗಳನ್ನು ಏರ್ಪಡಿಸಿ ತರಬೇತಿಗಳನ್ನು ಏರ್ಪಡಿಸಿ ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸಬಹುದು ಎಂದರು.
ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ತಿಲಗಾರ್ ಅವರು ಮಾತನಾಡಿ, ಸಾಹಿತ್ಯದಲ್ಲಿ ಕೃಷಿ ಮಾಡಬೇಕೆಂದರೆ, ಆಸಕ್ತಿ ಅಭಿರುಚಿ ಹಾಗೂ ನಿರಂತರ ಪರಿಶ್ರಮ ಅಧ್ಯಯನಗಳು ಅಗತ್ಯ ಎಂದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ರಾಣಿ ಮಾಚಯ್ಯ ಮತ್ತು ರಿಜಿಸ್ಟ್ರಾರ್ ವಿನೋದ್ ಚಂದ್ರ ಅಕಾಡೆಮಿಯು ಸಾಹಿತ್ಯ ಸಂಸ್ಕೃತಿಯ ಬೆಳವಣಿಗೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಮತ್ತು ಬಹುಭಾಷಾ ಕವಿಗೋಷ್ಠಿಯ ಉದ್ದೇಶದ ಬಗ್ಗೆ ತಿಳಿಸಿದರು.
ಕವಿಗೋಷ್ಠಿಯಲ್ಲಿ ಕುಡಿಯರ ಮುತ್ತಪ್ಪ, ರಾಣು ಅಪ್ಪಣ್ಣ, ನಾಗೇಶ್ ಕಾಲೂರು, ಮಂಡೆಪಂಡ ಗೀತಾ ಮಂದಣ್ಣ, ಕಸ್ತೂರಿ ಗೋವಿಂದಮಯ್ಯ, ಚಕ್ಕೇರ ತ್ಯಾಗರಾಜ್, ನಿವ್ಯ ಮದೆ ಜೋಯಪ್ಪ, ರಾಕೇಶ್ ಚಿನ್ನಪ್ಪ, ಪ್ರೀತಿ ಗಣೇಶ್, ರೇವತಿ ಪೂವಯ್ಯ, ರೇವತಿ ರಮೇಶ್, ಎಂ.ಇ. ಮಹಮದ್, ಪ್ರವೀಣ ಚಂಗಪ್ಪ, ಮಂಡೆಪಂಡ್ಡ ಸವಿತಾ ಕಾರ್ಯಪ್ಪ, ರವಿ ಸುಬ್ಬಯ್ಯ ಅವರು ಕವನಗಳನ್ನು ವಾಚಿಸಿ ಗಮನ ಸೆಳೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.