ADVERTISEMENT

ಎರಡು ಕಡೆ ಮತದಾನ ವಿಳಂಬ

​ಪ್ರಜಾವಾಣಿ ವಾರ್ತೆ
Published 13 ಮೇ 2018, 10:10 IST
Last Updated 13 ಮೇ 2018, 10:10 IST

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಬಹುತೇಕ ಭಾಗಗಳಲ್ಲಿ ಶಾಂತಿಯುತ ಮತದಾನ ನಡೆದಿದೆ. ಗೋಣಿಕೊಪ್ಪಲು, ಪೊನ್ನಂಪೇಟೆ, ತಿತಿಮತಿ, ದೇವರಪುರ, ಮಾಯಮುಡಿ, ಬಾಳೆಲೆ, ಕಾನೂರು, ಹುದಿಕೇರಿ, ಶ್ರೀಮಂಗಳ ಭಾಗಗಳಲ್ಲಿ ಬೆಳಗಿನಿಂದಲೇ ಮತಕಟ್ಟೆಗಳಲ್ಲಿ ಮತದಾರರು ಸಾಲಾಗಿ ನಿಂತು ಮತದಾನ ಮಾಡಿದರು.

ತಿತಿಮತಿ, ಗೋಣಿಕೊಪ್ಪಲು ಮತಗಟ್ಟೆಯಲ್ಲಿ ಮತಯಂತ್ರ ಕೆಟ್ಟು ನಿಂತು ಒಂದು ಗಂಟೆಗಳ ಕಾಲ ಮತದಾನ ಮಾಡಲು ಸಾಧ್ಯವಾಗಲಿಲ್ಲ.

ಚುನಾವಣಾ ಅಧಿಕಾರಿಗಳು ಕೈಕೊಟ್ಟ ಮತಯಂತ್ರಗಳನ್ನು ಪರಿಶೀಲನೆ ನಡೆಸಿ ದೋಷ ಕಂಡ ಮತಯಂತ್ರಗಳನ್ನು ಬದಲಾಯಿಸಿದರು.

ADVERTISEMENT

ಮೇ ತಿಂಗಳಾದರಿಂದ ಶಾಲಾ– ಕಾಲೇಜುಗಳಿಗೆ ರಜೆ ಇದ್ದ ಕಾರಣ ಬಹಳಷ್ಟು ಮತದಾರರು ಪ್ರವಾಸ ಹಾಗೂ ಊರುಗಳಿಗೆ ತೆರಳಿದ್ದರಿಂದ ಬಹಳಷ್ಟು ಗ್ರಾಮಗಳಲ್ಲಿ ಮತದಾನ ಕುಂಠಿತಗೊಳ್ಳಲು ಕಾರಣವಾಯಿತು.
ತಿತಿಮತಿ ಭಾಗದ ಹಾಡಿ ನಿವಾಸಿಗಳು ಹೆಚ್ಚಾಗಿ ಮತದಾನ ಮಾಡಲು ಭಾಗವಹಿಸಿದರು.

ಅವ್ಯವಸ್ಥೆ: ಬಹಳಷ್ಟು ಮತಗಟ್ಟೆಗಳಲ್ಲಿ ಮತದಾರರು ಗುರುತಿನ ಚೀಟಿಯನ್ನು ಹೊಂದಿದ್ದರೂ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದೇ ಇರುವುದರಿಂದ ಮತ ಹಾಕಲು ಸಾಧ್ಯವಾಗಲಿಲ್ಲ.

ಅಧಿಕಾರಿಗಳ ನಿರ್ಲಕ್ಷ್ಯ ಎಂದು ಮತದಾರರು ಅಸಮಾಧಾನ ವ್ಯಕ್ತಪಡಿಸಿದರು. ಈ ಅವ್ಯವಸ್ಥೆಗೆ ತಹಶೀಲ್ದಾರ್‌ ನಿರ್ಲಕ್ಷ್ಯವೇ ಕಾರಣ ಸಾರ್ವಜನಿಕರು ಆರೋಪಿಸಿದರು. ಬಿಜೆಪಿ ಅಭ್ಯರ್ಥಿ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಕಾಂಗ್ರೆಸ್‌ ಮತಗಟ್ಟೆಗಳಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಜಿ. ಬೋಪಯ್ಯ, ಪ್ರತಿ ಮತಗಟ್ಟೆಯಲ್ಲೂ ಮತದಾರರು ಬಿಜೆಪಿಯನ್ನು ಒಲವಿನಿಂದ ಅಪ್ಪಿಕೊಂಡಿದ್ದಾರೆ. ಜಯ ನಮ್ಮದೇ ಎಂಬ ಭರವಸೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.