ADVERTISEMENT

ಕಾಡಿಗೆ ಮರಳಿದ ಆನೆ ಹಿಂಡು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 4:29 IST
Last Updated 17 ಡಿಸೆಂಬರ್ 2013, 4:29 IST

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಶಾಂತಪುರ, ಶಿವಪುರ, ಜನಾರ್ದನಹಳ್ಲಿ, ಕೆಳಕೊಡ್ಲಿ, ಹಂಪಾಪುರ ಮೊದಲಾದ ಗ್ರಾಮಗಳಲ್ಲಿ ಬೀಡುಬಿಟ್ಟಿದ್ದ ಸುಮಾರು 22 ಕಾಡಾನೆಗಳನ್ನು ಅರಣ್ಯದತ್ತ ಅಟ್ಟುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಶನಿವಾರ ಸಂಜೆಯೇ ಕಾಫಿ ತೋಟಗಳಿಗೆ ನುಗ್ಗಿದ ಆನೆಗಳು ಕಾಫಿ, ಬಾಳೆ, ತೆಂಗು ಹಾಗೂ ಭತ್ತದ ಬೆಳೆಗಳನ್ನು ನಾಶಪಡಿಸುತ್ತ ಗ್ರಾಮಗಳಲ್ಲಿ ತಿರುಗಾಡುತ್ತಿದ್ದವು. ಗದ್ದೆಗಳಲ್ಲಿ ರೈತರು ಖಟಾವು ಮಾಡಿ ಹೊರೆಗಟ್ಟಿ ಇಟ್ಟಿದ್ದ ಭತ್ತದ ಬೆಳೆಯನ್ನು ಸಂಪೂರ್ಣ ಹಾಳುಮಾಡಿವೆ.

ಭಾನುವಾರ ಬೆಳಿಗ್ಗೆ ಕಾಫಿ ತೋಟದಲ್ಲಿ ಸೇರಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ 14 ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಮಾಡಿದರು.

‘ಮೇಲಾಧಿಕಾರಿಗಳು ಸ್ಥಳಕ್ಕೆ ಬಂದಿದ್ದರೆ ಕಾಡಾನೆಗಳನ್ನು ಬೇರೆಡೆಗೆ ಕಳುಹಿಸಲು ಆದೇಶ ನೀಡುತ್ತಿದ್ದರು. ಆದರೆ, ಸ್ಥಳೀಯ ಅರಣ್ಯ ಇಲಾಖೆ ಅರಣ್ಯದತ್ತ ಓಡಿಸಿದರೂ ಮತ್ತೆ ಅವು ಊರಿನತ್ತ ಬರುವ ಸಾಧ್ಯತೆ ಇದೆ. ಸಾರ್ವಜನಿಕರಿಗೆ, ರೈತರಿಗೆ, ಶಾಲಾ– ಕಾಲೇಜು ವಿದ್ಯಾರ್ಥಿಗಳಿಗೆ ಗಂಡಾಂತರ ತಪ್ಪಿದ್ದಲ್ಲ. ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಅರಣ್ಯ ಇಲಾಖೆ ಮೇಲಾಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು. ಈ ವ್ಯಾಪ್ತಿಯಲ್ಲಿ ಆಗುತ್ತಿರುವ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಕೋಡಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಾಡಾನೆಗಳು ತಂಗಿದ್ದ ಕಾಫಿ ತೋಟ, ಗ್ರಾಮದ ಮಧ್ಯೆ ಇದ್ದುದರಿಂದ ಜನರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಲು ಅರಣ್ಯ ಇಲಾಖೆ ವಾಹನವನ್ನು ಉಪಯೋಗಿಸಬೇಕಾಯಿತು. ಈ ಸಂದರ್ಭ ಅರಣ್ಯವಲಯಾಧಿಕಾರಿ ಅಚ್ಚಯ್ಯ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.