ಶನಿವಾರಸಂತೆ: ಕಾಫಿಯನ್ನು ರಾಷ್ಟ್ರೀಯ ಪಾನೀಯ ಎಂದು ಘೋಷಿಸಬೇಕು ಹಾಗೂ ಸರ್ಕಾರಿ ಕೃಷಿ ಜಮೀನು ಒತ್ತುವರಿ ಸಮಸ್ಯೆ ನಿವಾರಿಸಬೇಕು ಎಂದು ಆಗ್ರಹಿಸಿ ಶನಿವಾರಸಂತೆ ಹೋಬಳಿಯ ಕಾಫಿ ಬೆಳೆಗಾರರ ಸಂಘದ ವತಿಯಿಂದ ಶುಕ್ರವಾರ ಜನ ಜಾಗೃತಿ ಅಭಿಯಾನ ನಡೆಯಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಕಾಫಿ ಬೆಳೆಗಾರರು ಹಾಗೂ ಭಾರತಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಗುಡುಗಳಲೆಯಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತದವರೆಗೆ ಜಾಥಾ ನಡೆಸಿ, ಅಲ್ಲಿ ಸಮಾರಂಭದಲ್ಲಿ ಪಾಲ್ಗೊಂಡರು.
ಆಂದೋಲನದ ನೇತೃತ್ವ ವಹಿಸಿದ್ದ ಕಾಫಿ ರಾಷ್ಟ್ರೀಯ ಪಾನೀಯ ಆಂದೋಲನದ ಜಿಲ್ಲಾ ಸಂಚಾಲಕ ಎಂ.ಎಂ. ರವೀಂದ್ರ ಮಾತನಾಡಿ, ಪ್ರಪಂಚದ 2ನೇ ಅತ್ಯಮೂಲ್ಯ ಪಾನೀಯ ಕಾಫಿ. ಭಾರತದಲ್ಲಿ ಕಾಫಿಯು ರಾಷ್ಟ್ರೀಯ ಮಹತ್ವ ಪಡೆದಿದ್ದು, ಸಾವಿರಾರು ಕೋಟಿ ರೂಪಾಯಿ ವಿದೇಶಿ ವಿನಿಮಯ ಗಳಿಸುತ್ತಿದೆ. ಆದರೂ ಬೆಳೆಗಾರರಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ. ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸುವುದು ಹಾಗೂ ಕಾಫಿಯನ್ನು ರಾಷ್ಟ್ರೀಯ ಪಾನೀಯ ಎಂದು ಘೋಷಿಸುವುದರಿಂದ ಸೂಕ್ತ ಲಾಭ ಪಡೆಯಬಹುದು ಎಂದರು.
ಹಾಸನ ಜಿಲ್ಲಾ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಎಚ್.ಎಚ್. ಉದಯ್ ಮಾತನಾಡಿ, ಕಾಫಿ ಬೆಳೆಗಾರರ ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಸಂಘಟನೆಗಳಿಂದ ಮಾತ್ರ ಸಮಸ್ಯೆ ಪರಿಹಾರವಾಗಬಹುದು.
ವಿಧಾನಸೌಧದಲ್ಲಿ ಕುಳಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬೆಳೆಗಾರರ ಮೇಲೆ ಸವಾರಿ ಮಾಡುತ್ತಿದ್ದಾರೆ. ಕಾಡಾನೆಗಳ ದಾಳಿಯಿಂದ ಕಾಫಿ ಬೆಳೆ ರಕ್ಷಿಸಲು ಯೋಜಿಸದ ಅಧಿಕಾರಿಗಳು, ರೈತರು ಹಾಗೂ ಹಾಡಿಗಳ ನಿವಾಸಿಗಳನ್ನು ಸ್ಥಳಾಂತರಿಸಲು ಆಸಕ್ತಿ ತೋರುತ್ತಿದ್ದಾರೆ ಎಂದರು.
ಸಂಘಟಿತರಾಗುವುದು ಅನಿವಾರ್ಯ
ಇಂದು ಗೊಬ್ಬರದ ಬೆಲೆ ಕೂಡ ಹೆಚ್ಚಾಗಿದೆ. ಇಳುವರಿ ಕಡಿಮೆಯಾಗಿದೆ. ಖರ್ಚು ಹೆಚ್ಚಾಗಿದ್ದು, ಲಾಭದ ಮಟ್ಟ ತುಂಬ ಕುಸಿದಿದೆ. ಇಂಥದರಲ್ಲಿ ಕಾಫಿ ಬೆಳೆಗಾರರು ಸ್ವಾರ್ಥವನ್ನು ಬದಿಗೊತ್ತಿ ಸಂಘಟಿತರಾಗಬೇಕು ಎಂದು ಕರೆ ನೀಡಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ ಖಜಾಂಚಿ ತೀರ್ಥಮಲ್ಲೇಶ್ ಮಾತನಾಡಿ, ಈಗಾಗಲೇ ಒತ್ತುವರಿ ಆಗಿರುವ ಜಮೀನನ್ನು ತೆರವುಗೊಳಿಸಲು ಹೊರಟಿರುವ ಸರ್ಕಾರದ ನಿಯಮವನ್ನು ಪ್ರತಿಭಟಿಸಿ, ಈ ನಿಲುವನ್ನು ಹಿಂತೆಗೆಯಲು ಒಕ್ಕೊರಲಿನಿಂದ ಸರ್ಕಾರವನ್ನು ಒತ್ತಾಯಿಸಬೇಕು. ವ್ಯವಸ್ಥಿತ ರೀತಿಯಲ್ಲಿ ಸಂಘಟನೆಯಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹೋಬಳಿ ಮಟ್ಟದ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಬಿ. ನಾಗಪ್ಪ ಮಾತನಾಡಿ, ಜನ ಜಾಗೃತಿ ಅಭಿಯಾನದಲ್ಲಿ ಬೆಳೆಗಾರರ ಕೊರತೆ ಎದ್ದು ಕಾಣುತ್ತಿದೆ. ಸಾಕಷ್ಟು ಪ್ರಚಾರ ನಡೆಸಿದ್ದರೂ ಬೆಳೆಗಾರರು ಪಾಲ್ಗೊಳ್ಳಲಿಲ್ಲ. ಭಾರತಿ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡು ಶಕ್ತಿ ನೀಡಿದ್ದಾರೆ. ಬೆಳೆಗಾರರಲ್ಲಿ ಸಂಘಟನೆಯ ಮನೋಭಾವ ಮೂಡದಿದ್ದರೆ ಸಮಸ್ಯೆ ಪರಿಹಾರವಾಗಲಾರದು ಎಂದರು.
ಎಚ್.ಪಿ. ಶೇಷಾದ್ರಿ, ಎಸ್.ಎನ್. ರಘು, ಎಸ್.ಕೆ. ವೀರಪ್ಪ, ಶಂಕರೇಗೌಡ, ಸುಧೀರ್ ಮತ್ತಿತರ ಪ್ರಮುಖರು ಇದ್ದರು. ಸಂಘದ ಕಾರ್ಯದರ್ಶಿ ಆರ್.ಪಿ. ಲಕ್ಷ್ಮಣ್ ನಿರೂಪಿಸಿದರು. ಎಂ.ಯು. ಮಹ್ಮದ್ಪಾಷ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.