ಕುಶಾಲನಗರ: ಕೂಡ್ಲೂರು ಕೈಗಾರಿಕಾ ಪ್ರದೇಶ ವಾರ್ಷಿಕ ಅಂದಾಜು ₹ 5 ಸಾವಿರ ಕೋಟಿ ವಹಿವಾಟು ನಡೆಸಿದರೂ ಕೆಐಎಡಿಬಿ ನಿರ್ಲಕ್ಷ್ಯಿಸಿದೆ’ ಎಂದು ಕೂಡ್ಲೂರು ಕೈಗಾರಿಕಾ ಬಡಾವಣೆ ಉದ್ದಿಮೆದಾರರ ಸಂಘದ ಅಧ್ಯಕ್ಷ ಎ.ಎನ್. ಪ್ರವೀಣ್ ಹೇಳಿದರು. ಪರ್ಪಲ್ ಫಾಮ್ ರೆಸಾರ್ಟ್ನಲ್ಲಿ ಈಚೆಗೆ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
‘ರಸ್ತೆ ಸೇರಿ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ರಾಜ್ಯದಲ್ಲೇ ಕೆಟ್ಟ ಸ್ಥಿತಿಯಲ್ಲಿ ಇರುವ ಕೈಗಾರಿಕಾ ಪ್ರದೇಶ ಇದಾಗಿದೆ’ ಎಂದು ವಿಷಾದಿಸಿದರು. ಕೂಡ್ಲೂರು ಕೈಗಾರಿಕಾ ಬಡಾವಣೆ ರಸ್ತೆಗಳ ಅಭಿವೃದ್ಧಿಗೆ ಸರ್ಕಾರಕ್ಕ ಒಟ್ಟು ₹ 9 ಕೋಟಿ ರೂಪಾಯಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಸರ್ಕಾರ ₹ 3 ಕೋಟಿ ರೂಪಾಯಿ ಮಾತ್ರ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಹೇಳಿದರು.
ಉದ್ದಿಮೆಗಳು ಮಳೆಕೊಯ್ಲು ಯೋಜನೆ ಅಳವಡಿಸಿ ₹ 2 ಲಕ್ಷ ಸಹಾಯಧನದ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು. ಸಂಘವು ಜಿಲ್ಲಾಧಿಕಾರಿ ಜೊತೆ ಸತತ ಸಂಪರ್ಕ ಇರಿಸಿಕೊಂಡು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಂಘಕ್ಕೆ 10 ಸೆಂಟ್ ಜಾಗ ಮಂಜೂರಾಗಿದೆ. ಕಟ್ಟಡ ನಿರ್ಮಿಸಲು ವಂತಿಗೆ ನೀಡಿ ಸದಸ್ಯರು ಸಹಕರಿಸಬೇಕಿದೆ ಎಂದು ಹೇಳೀದರು.
ಕೈಗಾರಿಕಾ ಬಡಾವಣೆಯಲ್ಲಿ ರಸ್ತೆ ಬದಿ ಗೂಡಂಗಡಿಗಳಿಂದ ತೊಂದರೆ ಆಗುತ್ತಿದೆ. ಈಗ ಮದ್ಯದಂಗಡಿಯೂ ತೆರೆದಿದ್ದು, ಕಾರ್ಮಿಕರ ಹಿತದೃಷ್ಟಿಯಿಂದ ಮಾರಕವಾಗಿದೆ. ಜಿಲ್ಲಾಡಳಿತ ಇತ್ತ ಗಮನಿಸಬೇಕು ಎಂದು ಕೋರಿದರು.
ಕಾರ್ಯದರ್ಶಿ ಎನ್.ಇ. ಶಿವಪ್ರಕಾಶ್, ಉಪಾಧ್ಯಕ್ಷ ಕೆ.ಎಂ.ಜಗದೀಶ್, ನಿರ್ದೇಶಕರಾದ ಟಿ.ಆರ್. ಶರವಣ ಕುಮಾರ್, ಎಸ್.ಎಲ್.ಎನ್. ವಿಶ್ವನಾಥ್, ಸಾತಪ್ಪನ್, ಬಿ.ಎಲ್. ಹರೀಶ್, ಮೊಹಮ್ಮದ್ ಹುಸೇನ್, ಕೃಷ್ಣ ಕೆ.ವರದ ಇದ್ದರು. ಪ್ರವೀಣ್ 2ನೇ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ವಿವಿಧ ಸದಸ್ಯರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.