ADVERTISEMENT

ತೀರ್ಥೋದ್ಭವ: ನೇರ ಪ್ರಸಾರ ಮಾಡಲು ಕ್ರಮ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 12:25 IST
Last Updated 13 ಅಕ್ಟೋಬರ್ 2011, 12:25 IST

ಮಡಿಕೇರಿ: ಅ.17ರ ಮಧ್ಯರಾತ್ರಿ ನಡೆಯಲಿರುವ ತೀರ್ಥೋದ್ಭವವನ್ನು ತಲಕಾವೇರಿಗೆ ಆಗಮಿಸುವ ಪ್ರತಿಯೊಬ್ಬ ಭಕ್ತರು ವೀಕ್ಷಿಸಲು ಅನು ಕೂಲವಾಗುವ ರೀತಿಯಲ್ಲಿ ತಲಕಾವೇರಿಯ ನಾಲ್ಕು ಕಡೆ ದೊಡ್ಡ ಪರದೆಗಳ ಮೇಲೆ ನೇರ ಪ್ರಸಾರ ಮಾಡಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಹೇಳಿದರು.

ತುಲಾ ಸಂಕ್ರಮಣ ಜಾತ್ರೆಯ ಪೂರ್ವ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಲು ಬುಧವಾರ ತಲಕಾವೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.ಇದರ ಜೊತೆ ಭಕ್ತರಿಗೆ ಯಾವುದೇ ತೊಂದರೆ ಯಾಗದಂತೆ ನೋಡಿಕೊಳ್ಳಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಮಡಿಕೇರಿ-ಭಾಗಮಂಡಲ-ತಲಕಾವೇರಿ ನಡುವಿನ ಸಂಪರ್ಕ ರಸ್ತೆಯಲ್ಲಿನ ಗುಂಡಿ ಮುಚ್ಚುವ ಮತ್ತು ರಸ್ತೆಯ ಬದಿಯಲ್ಲಿ ಬೆಳೆ ದಿರುವ ಗಿಡಗಳನ್ನು ತೆಗೆಯುವ ಕಾರ್ಯ ಭರ ದಿಂದ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಈ ಬಾರಿ ಅಕ್ಟೋಬರ್, 17ರ ರಾತ್ರಿ 11.43ಕ್ಕೆ ತುಲಾ ಸಂಕ್ರಮಣ ತೀರ್ಥೋದ್ಭವ ವಾಗುವುದರಿಂದ ಇಡೀ ರಾತ್ರಿ ವಿದ್ಯುತ್ ವ್ಯತ್ಯಯ ಉಂಟಾಗದಂತೆ ಕ್ರಮವಹಿಸಬೇಕು ಎಂದು ಸೆಸ್ಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜು ನಾಥ್ ಅಣ್ಣಿಗೇರಿ ಮಾತನಾಡಿ, ವಾಹನ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಡಿವೈಎಸ್‌ಪಿಗಳು, ಸರ್ಕಲ್  ಇನ್ಸ್‌ಪೆಕ್ಟರ್‌ಗಳು, ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಸುಮಾರು 800 ಪೊಲೀಸ್ ಸಿಬ್ಬಂದಿ ಗಳನ್ನು ನಿಯೋಜಿಸಲಾಗುವುದು ಎಂದರು.

ಪೊಲೀಸ್ ಸಿಬ್ಬಂದಿ ಜೊತೆಗೆ ಹೋಂಗಾರ್ಡ್‌ಗಳ ನೆರವನ್ನು ಪಡೆಯಲಾಗುವುದು ಎಂದು ಅವರು ತಿಳಿಸಿದರು.
ಭಾಗಮಂಡಲ ಶಾಲೆ ಬಳಿಯಿಂದ ತಲ ಕಾವೇರಿಗೆ ಕೆಎಸ್‌ಆರ್‌ಟಿಸಿ ಬಸ್ ತೆರಳಲು ಅವಕಾಶ ಕಲ್ಪಿಸಲಾಗಿದೆ.

ಖಾಸಗಿ ಬೃಹತ್ ವಾಹನಗಳನ್ನು ಭಾಗಮಂಡಲದಲ್ಲಿಯೇ ನಿಲ್ಲಿಸ ಬೇಕಾಗುತ್ತದೆ. ನಾಲ್ಕು ಚಕ್ರದ ವಾಹನಗಳನ್ನು ಮಾತ್ರ ತಲಕಾವೇರಿ ಬಳಿಯ ಪಾರ್ಕಿಂಗ್ ಸ್ಥಳಕ್ಕೆ ಬಿಡಲಾಗುವುದು. ಅಲ್ಲಿಂದ 200 ಮೀಟರ್ ನಡೆದು ಭಕ್ತಾಧಿಗಳು ತಲಕಾವೇರಿಗೆ ತೆರಳ ಬೇಕಾಗಿದೆ ಎಂದು ಅವರು ಹೇಳಿದರು.

ಪಾಸ್ ಹೊಂದಿರುವ ಗಣ್ಯರು ಹಾಗೂ ಅಗತ್ಯತೆ ಇರುವ ವಾಹನಗಳಿಗೆ ಮಾತ್ರ ತಲ ಕಾವೇರಿಗಳ ದೇವಸ್ಥಾನದ ಬಳಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗುವುದು. ಪಾಸ್ ಇಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ತಡೆಯಲಾಗು ವುದು. ತಲಕಾವೇರಿಯಲ್ಲಿ ವಾಹನ ನಿಲುಗಡೆ ಜಾಗ ಭರ್ತಿಯಾದಲ್ಲಿ ಭಾಗಮಂಡಲದಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ತಲಕಾವೇರಿಯಲ್ಲಿ ಗಣ್ಯರು ತೀರ್ಥೋದ್ಬವ ವೀಕ್ಷಿಸಲು ಅನುಕೂಲ ಮಾಡಲಾಗುತ್ತದೆ. ದೇವ ಸ್ಥಾನದ ಸುತ್ತಲೂ ಬ್ಯಾರಿಕೇಡ್ ನಿರ್ಮಿಸ ಲಾಗುತ್ತದೆ ಎಂದರು. ಜಿ.ಪಂ.ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಎನ್.ಕೃಷ್ಣಪ್ಪ ಮಾತನಾಡಿ, ಜಿಲ್ಲಾ ಪಂಚಾಯಿತಿ ವತಿಯಿಂದ ಶುದ್ಧ ಕುಡಿಯುವ ನೀರು, ಶುಚಿತ್ವ, ಆರೋಗ್ಯ ಕಾಪಾಡಲು ಗಮನ ಹರಿಸ ಲಾಗು ವುದು ಎಂದರು.

ಹಿರಿಯ ಉಪವಿಭಾಗಾಧಿಕಾರಿ ಡಾ. ಎಂ. ಆರ್. ರವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಕುಮಾರ್, ಲೋಕೋಪ ಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗಜಾನನ ಪ್ರಸಾದ್, ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿ ಯಂತರರಾದ ಮಹದೇವಸ್ವಾಮಿ, ತಹಸೀಲ್ದಾರ್ ಬಾಬು ರವೀಂದ್ರನಾಥ್ ಪಟೇಲ್, ಭಾಗಮಂಡಲ ತಲಕಾವೇರಿ ದೇವಸ್ಥಾನ ಸಮಿತಿಯ ಜಗದೀಶ್‌ಕುಮಾರ್, ಸಂಪತ್ ಕುಮಾರ್, ತಾ.ಪಂ. ಸಿಇಓ ಸತ್ಯನಾರಾಯಣ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.