ADVERTISEMENT

ಪೊನ್ನಂಪೇಟೆ ತಾಲ್ಲೂಕು ರಚನೆ ಹೋರಾಟ: 51ನೇ ದಿನಕ್ಕೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 6:58 IST
Last Updated 22 ಡಿಸೆಂಬರ್ 2017, 6:58 IST

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕು ರಚನೆಗೆ ಒತ್ತಾಯಿಸಿ 51 ದಿನಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಗುರುವಾರ ನಲ್ಲೂರಿನ ಸರಸ್ವತಿ ಯುವಕ ಸಂಘ, ಗಣಪತಿ ಸ್ತ್ರೀಶಕ್ತಿ ಸಂಘ, ಶ್ರೀನಿಧಿ ಲೇಡೀಸ್ ಅಸೋಸಿಯೇಷನ್‌ನ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಮ್ಮ ಸಂಘಗಳ ಬ್ಯಾನರ್ ಹಿಡಿದು ಅಲ್ಲಿನ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ‘ಪೊನ್ನಂಪೇಟೆ ತಾಲ್ಲೂಕು ರಚನೆಯಾಗಲೇ ಬೇಕು’ ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.

ಗಾಂಧಿ ಮಂಟಪದವರೆಗೆ ಪ್ರತಿಭಟನೆ ನಡೆಸಿ ಧರಣಿಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ರಚನೆ ಸಮಿತಿ ಕಾರ್ಯಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ, ಹೋರಾಟದ ಕೂಗು ಸರ್ಕಾರಕ್ಕೆ ತಲುಪಿದೆ. ಸರ್ಕಾರ ಸಕಾರತ್ಮಕವಾಗಿ ಸ್ಪಂದಿಸುವ ಸಾಧ್ಯತೆ ಇದೆ. ಈಗಾಗಲೆ ಪೊನ್ನಂಪೇಟೆ ಸುತ್ತಮುತ್ತಲಿನ 150ಕ್ಕೂ ಹೆಚ್ಚಿನ ಸಂಘಟನೆಗಳು ಬೆಂಬಲ ಸೂಚಿಸಿ, ಹೋರಾಟದಲ್ಲಿ ಪಾಲ್ಗೊಂಡಿವೆ. ಆದರೂ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕಾಗಿದೆ ಎಂದು ನುಡಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್.ಕುಶಾಲಪ್ಪ ಮಾತನಾಡಿ, ಜನತೆ ಹೊಸದಾಗಿ ತಾಲ್ಲೂಕಿಗೆ ಒತ್ತಾಯಿಸುತ್ತಿಲ್ಲ, 1956ಕಿಂತ ಹಿಂದೆ ಇದ್ದ ಕಿಗ್ಗಟ್ಟುನಾಡು ತಾಲ್ಲೂಕನ್ನು ಮರಳಿ ಕೊಡಿ ಎಂದಷ್ಟೆ ಕೇಳುತ್ತಿದ್ದಾರೆ. ಸರ್ಕಾರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಕೈಕೇರಿಯ ಜಮ್ಮಡ ಮೊಹನ್ ಮಾತನಾಡಿದರು.

ನಲ್ಲೂರು ಗ್ರಾಮದ ಹರೀಶ್, ಗಿರೀಶ್, ಅಶೋಕ್, ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೆಪ್ಪುಡೀರ ಪೊನ್ನಪ್ಪ, ಚೆಪ್ಪುಡೀರ ಸೋಮಯ್ಯ, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಕೆ.ಎಂ.ಗಣಪತಿ, ನಾಗರಿಕ ವೇದಿಕೆ ಅಧ್ಯಕ್ಷ ಪಿ.ಬಿ.ಪೂಣಚ್ಚ, ಹಿರಿಯ ವಕೀಲ ಮತ್ರಂಡ ಅಪ್ಪಚ್ಚು, ಕೋಳೆರ ದಯಾಚಂಗಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.