ADVERTISEMENT

ಪೌರ ಕಾರ್ಮಿಕರಿಗೆ ನಿವೇಶನ: ಕ್ರಮದ ಭರವಸೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 6:37 IST
Last Updated 24 ಸೆಪ್ಟೆಂಬರ್ 2013, 6:37 IST

ಮಡಿಕೇರಿ: ಪೌರ ಕಾರ್ಮಿಕರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ನಗರಸಭೆ ಆಯುಕ್ತ ಎನ್.ಎಂ.ಶಶಿಕುಮಾರ್ ಹೇಳಿದರು.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸೋಮವಾರ ನಗರಸಭೆ ವತಿಯಿಂದ ಆಚರಿಸಲಾದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಪೌರ ಕಾರ್ಮಿಕರಿಗೆ ನಿವೇಶನ ಒದಗಿಸಲು ಸರ್ಕಾರ ಈ ಹಿಂದೆಯೇ ಅನುದಾನ ಒದಗಿಸಿದೆ.  ಆದರೆ ತಾಂತ್ರಿಕ ತೊಂದರೆಯಿಂದ ನಿವೇಶನ ನೀಡುವ ಕಾರ್ಯ ವಿಳಂಬವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಲಾಗುವುದು ಎಂದರು. ಪೌರ ಕಾರ್ಮಿಕರು ನಗರ ಸಭೆಯಿಂದ ನೀಡಲಾಗಿರುವ ರೈನ್ ಕೋ ಟ್, ಗಂಬೂಟ್ ಧರಿಸಿ ಕಾರ್ಯನಿರ್ವಹಿಸಬೇಕು. ಆರೋಗ್ಯದ ಕಡೆಯೂ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಸಲಹೆ ಮಾಡಿದರು.

ದಸರಾ ಮುಗಿದ ನಂತರ ಪೌರ ಕಾರ್ಮಿಕರಿಗೆ ಪ್ರವಾಸ ಕಾರ್ಯಕ್ರಮ ಏರ್ಪಡಿಸಲಾಗುವುದು. ಡಿಸಂಬರ್‌ನಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.  ಮಡಿಕೇರಿ ತಾಲ್ಲೂಕು ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಹೋಬ್ಳಿ ಮಾತನಾಡಿ, ಪೌರ ಕಾರ್ಮಿಕರಿಗೆ ತಕ್ಷಣವೇ ನಿವೇಶನ ಒದಗಿಸಬೇಕು ಎಂದು ಅವರು ಮನವಿ ಮಾಡಿದರು.ಜಿಲ್ಲಾ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ರಾಮಚಂದ್ರ, ರಾಜ್ಯ ಪರಿಷತ್ ಸದಸ್ಯರಾದ ತಾಹೀರ್ ಅವರು ಮಾತನಾಡಿದರು.

23 ಪೌರ ಕಾರ್ಮಿಕರಿಗೆ ಚೇರ್ ಮತ್ತು ಟೇಬಲ್‌ಗಳನ್ನು ವಿತರಿಸಲಾಯಿತು. ಶಬರಿನಾಥ್ ರೈ ಸ್ವಾಗತಿಸಿದರು, ಹನುಮಂತರಾಯ ಪ್ರಾರ್ಥಿಸಿದರು. ಸತೀಶ್ ನಿರೂಪಿಸಿ, ವಂದಿಸಿದರು.

ಹೆಸರು ನೋಂದಾಯಿಸಲು ಮನವಿ
ಮಡಿಕೇರಿ: ಮಡಿಕೇರಿ ಜನೋತ್ಸವ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಮಕ್ಕಳ ದಸರಾವು ಅಕ್ಟೋಬರ್ 10ರಂದು ನಡೆಯಲಿದ್ದು, ಹೆಸರು ನೋಂದಾಯಿಸಲು ಸೆ. 26 ಕೊನೆಯ ದಿನವಾಗಿರುತ್ತದೆ.  ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಮಕ್ಕಳ ಮಂಟಪ ಸ್ಪರ್ಧೆ, ಮಕ್ಕಳ ಸಂತೆ ಕಾರ್ಯಕ್ರಮ ಹಾಗೂ ಜಿಲ್ಲೆಯ ಕುರಿತ ಕ್ವಿಜ್ ಸ್ಪರ್ಧೆ ನಡೆಯಲಿದೆ. ಛದ್ಮವೇಷ ಸ್ಪರ್ಧೆಯಲ್ಲಿ 5 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ.

‘ನಾನು ಕಂಡ ಕೊಡಗು’ ವಿಷಯ ಕುರಿತು ಚಿತ್ರಕಲಾ ಸ್ಪರ್ಧೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.  ಹೆಸರು ನೋಂದಾಯಿಸಲು ಮಾದೇಟಿರ ಬೆಳ್ಯಪ್ಪ-94800 22060, ಶಶಿ ಮೊಣ್ಣಪ್ಪ 94484 22321ನ್ನು ಹಾಗೂ ಹೆಚ್ಚಿನ ಮಾಹಿತಿಯನ್ನು ಎಚ್.ಟಿ. ಅನಿಲ್ 98440 60174ನ್ನು ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.