ADVERTISEMENT

ಬಸ್ ಸಂಚಾರ ವೇಳಾಪಟ್ಟಿ ಸಿದ್ಧ

ಆರ್‌ಟಿಒ- ಖಾಸಗಿ ಬಸ್ ಮಾಲೀಕರ ಸಭೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 6:42 IST
Last Updated 14 ಡಿಸೆಂಬರ್ 2012, 6:42 IST

ಮಡಿಕೇರಿ: ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಹೊಸದಾಗಿ ರಹದಾರಿ ಮಂಜೂರಾದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳ  ಸಂಚಾರ ವೇಳಾಪಟ್ಟಿ ನಿರ್ಧರಿಸುವ ಬಗ್ಗೆ ಆರ್‌ಟಿಒ ಕಚೇರಿ ಯಲ್ಲಿ ಗುರುವಾರ ಸಭೆ ನಡೆಯಿತು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಮಹಮ್ಮದ್ ಹಬೀಬುಲ್ಲಾ ಖಾನ್ ಮಾತನಾಡಿ, ಜಿಲ್ಲೆಯ ನಾನಾ ಭಾಗಗಳಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ವಿಭಾಗದ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ರಹದಾರಿ ದೊರೆತ್ತಿದ್ದು, ಆ ನಿಟ್ಟಿನಲ್ಲಿ ವೇಳಾಪಟ್ಟಿಯನ್ನು ನಿರ್ಧರಿಸಬೇಕಿದ್ದು, ಖಾಸಗಿ ಬಸ್ ಮಾಲೀಕರು ಸಲಹೆ ನೀಡಬಹುದಾಗಿದೆ ಎಂದರು.

ಜಿಲ್ಲೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಪರವಾನಗಿ ನೀಡಲಾಗಿದ್ದು, ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ವೇಳಾಪಟ್ಟಿ ಸಂಬಂಧಿಸಿದಂತೆ ಖಾಸಗಿ ಬಸ್ ಮಾಲೀಕರು ಆಕ್ಷೇಪಣೆಗಳನ್ನು ಸಹ ಸಲ್ಲಿಸಬಹುದಾಗಿದೆ ಎಂದರು.

ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿನ ಸಂಚಾರದಲ್ಲಿ ಸಮಯ ಮಾರ್ಪಡಿಸಿಕೊಂಡು ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ಸುಗಳು ಜಿಲ್ಲೆಯಲ್ಲಿ ಸಂಚರಿಸುವಂತೆ ಸಲಹೆ ಮಾಡಿದರು.

ಖಾಸಗಿ ಬಸ್ ಸೇವೆ
ಕೊಡಗು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಮಾತನಾಡಿ, ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿವೆ. ಅದನ್ನು ಮುಂದು ವರೆಸಿ ಕೊಂಡು ಹೋಗಲಾಗುವುದು. ಜನಸಂಖ್ಯೆಗೆ ಆಧರಿಸಿ ಬಸ್‌ಗಳ ಸಂಚಾರಕ್ಕೆ ಅವಕಾಶ ಮಾಡಿ ಕೊಡುವುದು ಒಳಿತಾಗಿದೆ. ಮಾರ್ಗ ಸಮೀಕ್ಷೆ ಮಾಡಬೇಕು. ಖಾಸಗಿ ಬಸ್ ಮಾಲೀಕರಿಗೆ ಅನ್ಯಾಯವಾಗದಂತೆ ವೇಳಾ ಪಟ್ಟಿಯನ್ನು ತಯಾರಿಸ ಬೇಕೆಂದರು.

ಸಂಘದ ಉಪಾಧ್ಯಕ್ಷ ನಂದ ಪೂಣಚ್ಚ ಮಾತನಾಡಿ, ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ಹೊರಡುವ ವೇಳೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳು ಅದೇ ವೇಳೆಯಲ್ಲಿ ಹೊರಡಬಾರದು. ವೇಳಾಪಟ್ಟಿಯಲ್ಲಿ ಅರ್ಧ, ಮುಕ್ಕಾಲು ಗಂಟೆ ವ್ಯತ್ಯಾಸವಿರುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಾದೇಶಿಕ ಸಾರಿಗೆ ಕಚೇರಿಯ ನಿರೀಕ್ಷಕರಾದ ವೆಂಕಟೇಶ ಅವರು ಬಸ್ಸುಗಳ ಸಂಚಾರ ವೇಳೆ ಬಗ್ಗೆ ಮಾಹಿತಿ ನೀಡಿದರು. ನಾನಾ ಖಾಸಗಿ ಬಸ್ಸು ಮಾಲೀಕರು ವೇಳಾಪಟ್ಟಿ ನಿರ್ಧರಿಸುವ ಸಭೆಯಲ್ಲಿ ಪಾಲ್ಗೊಂಡು ಹಲವು ಸಲಹೆಗಳನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.