ADVERTISEMENT

`ವರ್ಗರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿ'

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 7:03 IST
Last Updated 4 ಜೂನ್ 2013, 7:03 IST

ಗೋಣಿಕೊಪ್ಪಲು:ಎಲ್ಲ ವರ್ಗದವರನ್ನು ಸಮಾನವಾಗಿ ಕಂಡು ಮಾನವಪರ ಸಮಾಜವನ್ನು ನಿರ್ಮಿಸಿದ ಬಸವಣ್ಣ ಅವರ ತತ್ವ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡರೆ ವರ್ಗರಹಿತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ದಿಂಡಗಾಡು ಬಸವ ಜ್ಯೋತಿಮಠದ ಅಪ್ಪಾಜಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮೀಪದ ಕಾಕೂರಿನಲ್ಲಿ ಈಚೆಗೆ ಅಖಿಲ ಭಾರತ ವೀರಶೈವ ಮಹಾಸಭಾ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆರ್ಥಿಕತೆಯ ಬೆನ್ನು ಹತ್ತಿರುವ ಇಂದಿನ ಸಮಾಜ ಮೌಲ್ಯ ಕಳೆದುಕೊಳ್ಳುತ್ತಿದೆ. ಬಸವಣ್ಣನವರ ತತ್ವಗಳನ್ನು ಮೈಗೂಡಿಸಿಕೊಂಡರೆ ಆದರ್ಶ ಸಮಾಜ ಕಟ್ಟಬಹುದು ಎಂದರು.

ಮಹದೇವ ಸ್ವಾಮೀಜಿ ಮಾತನಾಡಿ, ಆಚಾರ- ವಿಚಾರ, ನಡೆ- ನುಡಿಗಳಲ್ಲಿ ಮೌಲ್ಯ ಇಟ್ಟುಕೊಳ್ಳಬೇಕು. ಯುವ ಜನರು ಉತ್ತಮ ಸಮಾಜ ಕಟ್ಟಲು ಬಸವಣ್ಣನವರ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅರಮೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ನುಡಿದಂತೆ ನಡೆದ ಬಸವಣ್ಣ ಅವರು 12ನೇ ಶತಮಾನದಲ್ಲಿ ಜಾತಿಯತೆ, ಮೌಢ್ಯತೆ ವಿರುದ್ಧ ಜನರನ್ನು ಸಂಘಟಿಸಿ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದರು. ಅವರ ತತ್ವಗಳು ಆರೋಗ್ಯಕರ ಸಮಾಜ ಸೃಷ್ಟಿಗೆ ಸಹಕಾರಿಯಾಗಲಿವೆ. ಸಮಾಜದ ಎಲ್ಲ ವರ್ಗದವರ ಮನತಟ್ಟುವ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದರು.

ವೀರಶೈವ ಮಹಾಸಭಾದ ಅಧ್ಯಕ್ಷ ಎಸ್.ಪಿ. ಮಹಾದೇವಪ್ಪ ಮಾತನಾಡಿದರು. ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ  ಕೆ.ಎನ್. ಸಂದೀಪ್ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ್ ಸ್ವಾಗತಿಸಿದರು. ಸಾವಿತ್ರಿ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.