ADVERTISEMENT

ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2013, 9:00 IST
Last Updated 23 ಫೆಬ್ರುವರಿ 2013, 9:00 IST
ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ
ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ   

ಸೋಮವಾರಪೇಟೆ: ಸಮೀಪದ ಚನ್ನಾಪುರ ಗ್ರಾಮದಲ್ಲಿ ನಿರ್ಮಿಸಲಾಗಿರುವ ಶಿವ ಬಸವೇಶ್ವರ ದೇವಾಲಯದಲ್ಲಿಬಸವೇಶ್ವರ ದೇವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಶುಕ್ರವಾರ ವಿಜೃಂಭಣೆ ಯಿಂದ ನಡೆಯಿತು. ಗುರುವಾರ ರಾತ್ರಿ ಉಚ್ಚಂಗಿಯ ಶೈವಾಗಮ ಪಂಡಿತರಾದ ಯು.ಆರ್.ಶೇಷಾಚಲ ಪುರೋಹಿತರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿಗಳು ನೆರವೇರಿದವು. 7ಕ್ಕೆ ಗ್ರಾಮಸ್ಥರಿಂದ ದೇವತಾ ಪ್ರಾರ್ಥನೆ, ಮಹಾಗಣಪತಿ ಪೂಜೆ, ಕಳಸ ಸ್ಥಾಪನೆ, ವೇದಪಾರಾಯಣ, ವಾಸ್ತು ಹೋಮ, ಮಹಾಬಲಿ ಪ್ರದಾನ ಹಾಗೂ ಭಕ್ತಾದಿಗಳಿಗೆ ಅನ್ನದಾನ ನಡೆಯಿತು.

ಬೆಳಿಗ್ಗೆ ಗಂಗಾಪೂಜೆಯ ನಂತರ 105 ಮಹಿಳೆಯರು ಕಳಸ ಹೊತ್ತು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ಗ್ರಾಮಸ್ಥರು ಅಡ್ಡಪಲ್ಲಕ್ಕಿಯಲ್ಲಿ ದೇವರ ವಿಗ್ರಹವನ್ನು ಕುಳ್ಳಿರಿಸಿ ದೇವಾಲಯಕ್ಕೆ ತಂದರು. ನಂತರ ಶಿಶಿರ ಪ್ರತಿಷ್ಠಾಪನೆ, ಗೋಪುರ ಪ್ರತಿಷ್ಠಾಪನೆ ಮಾಡಲಾಯಿತು. 11ಕ್ಕೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನದ ಹಾಸನ ಮಠದ ಶಂಭುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ದೇವಾಲಯದಿಂದ ಸಾಮರಸ್ಯ'
ದೇವಾಲಘಿು ನಿರ್ಮಾಣದಿಂದ ಗ್ರಾಮದಲ್ಲಿ ಸಾಮರಸ್ಯದ ಜೀವನ  ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು. ಸಮೀಪದ ಚನ್ನಾಪುರ ಗ್ರಾಮದಲ್ಲಿ ನಿರ್ಮಿಸಲಾಗಿರುವ ಶಿವಬಸವೇಶ್ವರ ದೇವಾಲಯದಲ್ಲಿ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪರಸ್ಪರ ಸಾಮರಸ್ಯ ಹಾಗೂ ಒಗ್ಗಟ್ಟಿನ ಬಾಳ್ವೆಗೆ ದೇವಾಲಯಗಳು ಸಹಕಾರಿಯಾಗಿವೆ ಎಂದ ಅವರು, ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಎಂದರು.

ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಕಳೆದ 5 ವರ್ಷಗಳಲ್ಲಿ ಗ್ರಾಮೀಣ ಭಾಗದ ಎಲ್ಲ ದೇವಾಲಯಗಳ ಜೀರ್ಣೋದ್ಧಾರಕ್ಕೆ ಕೋಟ್ಯಂತರ ರೂಪಾಯಿ ಅನುದಾನ ಒದಗಿಸಿದೆ ಎಂದರು. ಮಾಜಿ ಸಚಿವ ಬಿ.ಎ.ಜೀವಿಜಯ ಮಾತನಾಡಿ, ಭಾವೈಕ್ಯ ಸಾರುವ ಕೇಂದ್ರಗಳಾಗಿ ದೇವಾಲಯಗಳಿದ್ದು, ಆತ್ಮಶುದ್ಧಿಯೊಂದಿಗೆ ದೈವೀ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ದ್ವೇಷಾಸೂಯೆಗಳ ಆಚೆಗಿನ ಬದುಕನ್ನು ಗ್ರಹಿಸಬೇಕು ಎಂದು ತಿಳಿಸಿದರು.

ಆದಿಚುಂಚನಗಿರಿ ಮಹಾ ಸಂಸ್ಥಾನ ಹಾಸನ ಮಠದ ಶಂಭುನಾಥ ಸ್ವಾಮೀಜಿ ಮಾತನಾಡಿ ನಿಷ್ಕಲ್ಮಶ ಮನಸ್ಸಿನಿಂದ ಮಾಡುವ ಪ್ರಾರ್ಥನೆ ಭಗವಂತನಿಗೆ ಪ್ರಿಯವಾಗುತ್ತದೆ ಎಂದರು. ದೇವಾಲಯ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಸಿ.ಎನ್.ಅಶ್ವಥ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಬಿ.ಸೋಮಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯೆ ಎನ್.ಎಸ್.ಗೀತಾ, ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತೀರ್ಥಾ ಹರೀಶ್, ಗ್ರಾಮಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ವಿ.ಆರ್. ವೆಂಕಟೇಶ್, ಹಾಸನ ಎ.ವಿ.ಕೆ.ಕಾಲೇಜಿನ ಪ್ರಾಧ್ಯಾಪಕ ಡಾ.ಎಚ್.ಎಸ್.ಮಲ್ಲೇಶ್ ಗೌಡ, ಚನ್ನಾಪುರ ಗ್ರಾಮಾಭಿವೃದ್ಧಿ ಮಂಡಳಿ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT