ಮಡಿಕೇರಿ: ಜಿಲ್ಲಾ ಕಾವೇರಿ ತಮಿಳು ಸಂಘದ ವತಿಯಿಂದ ಸಿದ್ದಾಪುರ ಚರ್ಚ್ ಹಾಲ್ನಲ್ಲಿ ಎರಡನೇ ವರ್ಷದ ಪೊಂಗಲ್ ಆಚರಣೆಯು ಸೋಮವಾರ ನಡೆಯಿತು. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ತಮಿಳು ಭಾಷೆ ಅತ್ಯಂತ ಪುರಾತನವಾದುದು. ಜಿಲ್ಲೆಯು ಮದ್ರಾಸ್ ಪ್ರಾಂತ್ಯಕ್ಕೆ ಸೇರಿತ್ತು. ಈ ಕಾರಣಕ್ಕೆ ಜಿಲ್ಲೆಯಲ್ಲಿ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ ಎಂದರು.
‘ಇತ್ತೀಚಿನ ದಿನಗಳಲ್ಲಿ ತಮಿಳು ಭಾಷಿಕರಿಗೆ ಸರ್ಕಾರದಿಂದ ನ್ಯಾಯ ದೊರಕುತ್ತಿಲ್ಲ. ಶ್ರಮ ಜೀವಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಜನಾಂಗಗಳ ಏಳಿಗೆಗೆ ಸರ್ಕಾರ ಮುಂದಾಗಬೇಕು ಎಂದು ಕೋರಿದರು.
ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ ಮಾತನಾಡಿ, ಪಂಚಾಯಿತಿಯಿಂದ ಸಂಸತ್ತಿನವರೆಗೆ ತಮಿಳರ ಪ್ರಭಾವ ಹೆಚ್ಚಾಗಿದೆ. ಶ್ರಮಿಕರೇ ಹೆಚ್ಚಾಗಿದ್ದು ಜಿಲ್ಲೆಗೂ ತಮಿಳರ ಕೊಡುಗೆ ನೀಡಿದ್ದಾರೆ. ಜನಾಂಗದಲ್ಲಿ ತೀರಾ ಹಿಂದುಳಿದವರಿಗೆ ಸರ್ಕಾರದಿಂದ ಸೂರು ಕಲ್ಪಿಸುವ ಕೆಲಸ ಆಗಬೇಕಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಅಪ್ರು ಮಾತನಾಡಿ, ಮಡಿಕೇರಿಯಿಂದ ಮಧುರೈಗೆ ಬಸ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಾರಿಗೆ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಮುಖಂಡ ಸುರೇಶ್ ಬಿಳಿಗೇರಿ, ಜಿಲ್ಲಾ ಕಾವೇರಿ ತಮಿಳು ಸಂಘದ ಅಧ್ಯಕ್ಷ ತಿರುಮಾಲ್, ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಉಸ್ಮಾನ್, ಕಾವೇರಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ನ ವ್ಯವಸ್ಥಾಪಕ ಎಸ್.ಎಸ್. ನಾಗರಾಜು ಹಾಜರಿದ್ದರು.
ಹಾಸ್ಯ ಕಲಾವಿದ ಮಧುರೈ ಮುತ್ತು, ಮಹೇಶ್ ಪಿಳೈ, ವಿಘ್ನೇಶ್ ಎಂ. ಭೂತನಕಾಡು, ಸೇದುರಾಮನ್, ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಸಾಂಪ್ರದಾಯಿಕವಾಗಿ ಪೊಂಗಲ್ ಹಬ್ಬ ಆಚರಣೆ ಮಾಡಲಾಯಿತು. ಕಲಾವಿದ ಮಧುರೈ ಮುತ್ತು ತಂಡದಿಂದ ಹಾಸ್ಯ ಮಂಜರಿ ಪ್ರದರ್ಶನ ನಡೆಯಿತು. ಜನಾಂಗದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.