ADVERTISEMENT

ಸಾಹಿತ್ಯ ಸಮ್ಮೇಳನ: ರಥಯಾತ್ರೆಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 8:19 IST
Last Updated 1 ಜನವರಿ 2014, 8:19 IST

ಗೋಣಿಕೊಪ್ಪಲು: ಮಡಿಕೇರಿಯಲ್ಲಿ ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ಹಮ್ಮಿಕೊಂಡಿರುವ ‘ಸಾಹಿತ್ಯದ ನಡಿಗೆ ಹಳ್ಳಿಯೆಡೆಗೆ’ ರಥಯಾತ್ರೆಯನ್ನು ವಿರಾಜಪೇಟೆ ತಾಲ್ಲೂಕಿನ ಅರಮೇರಿ ಬಳಿ ಮಂಗಳವಾರ ಸ್ವಾಗತಿಸಲಾಯಿತು.

ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜನ ಸ್ವಾಮೀಜಿ ರಥಯಾತ್ರೆಗೆ  ಪುಷ್ಪ ಮಾಲೆ ಅರ್ಪಿಸುವ ಮೂಲಕ ರಥವನ್ನು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, 32 ವರ್ಷಗಳ ಬಳಿಕ ಜಿಲ್ಲೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಜರುಗಲಿ ಎಂದು  ಶುಭ ಹಾರೈಸಿದರು.

ಸಾಹಿತ್ಯ ಪರಿಷತ್ತಿನ ಕರಪತ್ರ ಬಿಡುಗಡೆ ಮಾಡಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅರುಣ್‌ ಭೀಮಯ್ಯ ಮಾತನಾಡಿ, ಸಾಹಿತ್ಯ ಮತ್ತು ಸಂಸ್ಕೃತಿ ಬೆಳೆಯಬೇಕಾದರೆ ಸಮ್ಮೇಳನಗಳ ಅಗತ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿರಾಜಪೇಟೆ ತಾಲ್ಲೂಕು ರಥಯಾತ್ರೆ ಸಂಚಾಲಕ ಟಾಟು ಮೊಣ್ಣಪ್ಪ, ರಥಯಾತ್ರೆ ಜಿಲ್ಲಾ ಅಧ್ಯಕ್ಷ ಟಿ.ಜಿ. ಪ್ರೇಮ್‌ಕುಮಾರ್‌, ಸಂಚಾಲಕ  ಬಿಆರ್‌ಸಿ ಶಿವರಾಂ, ಪ್ರಧಾನ ಸಂಚಾಲಕ ಶಿವಾನಂದ್‌, ಎಂ. ವಿಶ್ವನಾಥ್‌, ನಾಗರಾಜ್‌, ಬಿಇಒ ಭಾಗ್ಯಲಕ್ಷ್ಮೀ, ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.  ಕೇಶವಕಾಮತ್‌, ಪೊನ್ನಂಪೇಟೆ ಹೋಬಳಿ ಪರಿಷತ್ತಿನ ಅಧ್ಯಕ್ಷ ಬಿ.ಎನ್‌. ಪ್ರಕಾಶ್‌, ಸದಸ್ಯರಾದ ರಾಜಶೇಖರ್‌, ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಶ್‌, ಎ.ಸಿ. ಮಂಜುನಾಥ್‌, ತಾಲ್ಲೂಕು ಪಂಚಾಯಿತಿ ಇಒ ಕುಟ್ಟಪ್ಪ ಹಾಜರಿದ್ದರು.

ಬಳಿಕ ವಿರಾಜಪೇಟೆಗೆ ಬಂದ ರಥವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದೇಚಮ್ಮ, ಉಪಾಧ್ಯಕ್ಷ ಚಂದ್ರಶೇಖರ್‌, ಸದಸ್ಯರಾದ ತಸ್ಲೀಮ ಅಕ್ತರ್‌್, ಸುನಿತಾ, ಸರಿತಾ, ಭೀಮಯ್ಯ ಮುಂತಾದವರು ಸ್ವಾಗತ ಕೋರಿ ಬರಮಾಡಿ ಕೊಂಡರು.

ಸಂಜೆ 3 ಗಂಟೆಗೆ ಕುಂದ ಮಾರ್ಗವಾಗಿ ಪೊನ್ನಂಪೇಟೆಗೆ ಬಂದ ರಥವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್‌. ಕುಶಾಲಪ್ಪ ಹೂಮಾಲೆ ಅರ್ಪಿಸಿ ಸ್ವಾಗತಿಸಿದರು. ಸಂಜೆ ಗೋಣಿಕೊಪ್ಪಲಿನಲ್ಲಿ ತಂಗಿದ್ದು, ಬುಧವಾರ ಬೆಳಿಗ್ಗೆ ಪೊನ್ನಂಪೇಟೆ ಮಾರ್ಗವಾಗಿ ಹುದಿಕೇರಿ, ಶ್ರೀಮಂಗಲ. ಕುಟ್ಟ, ಕಾನೂರು, ನಿಟ್ಟೂರು, ಬಾಳೆಲೆ ಪೊನ್ನಪ್ಪ ಸಂತೆ, ಕೋಣನಕಟ್ಟೆ ಮಾರ್ಗವಾಗಿ ತಿತಮತಿ ತಲುಪಲಿದೆ ಎಂದು ಅಧ್ಯಕ್ಷ ಟಿ.ಜಿ. ಪ್ರೇಮ್‌ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.