ಮಡಿಕೇರಿ: ಗೋಹತ್ಯೆ ನಿಷೇಧ ಮತ್ತು ಗೋ ತಳಿ ಸಂರಕ್ಷಣೆ ಸಂಬಂಧ ರಾಮಚಂದ್ರಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ರಾಜ್ಯದಾದ್ಯಂತ ನಡೆಸುತ್ತಿರುವ ಅಭಯ ಗೋ ಯಾತ್ರೆ ಜ.4ರಂದು ಕೊಡಗು ಪ್ರವೇಶಿಸಲಿದೆ ಎಂದು ಗೋ ಪರಿವಾರ ಕೊಡಗು ಚಾರಿಟಬಲ್ ಟ್ರಸ್ಟಿ ಬಿ.ಕೆ. ಜಗದೀಶ್ ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋ ಸಂರಕ್ಷಣೆಯ ಸಂದೇಶ ವನ್ನು ದೇಶಕ್ಕೆ ಸಾರುವಲ್ಲಿ ಅಭಯ ಗೋ ಯಾತ್ರೆ ಮಹತ್ವದ್ದಾಗಿದೆ. ಯಾತ್ರೆಯಲ್ಲಿ 3 ರಥಗಳು ಇದ್ದು. ಕುಶಾಲನಗರದಲ್ಲಿ ಭವ್ಯ ಸ್ವಾಗತ ಕೋರಲಾಗುವುದು. ನಂತರ ಸುಂಟಿಕೊಪ್ಪ, ಮಡಿಕೇರಿ, ವೀರಾಜಪೇಟೆ, ಗೋಣಿಕೊಪ್ಪ, ಚೆಯ್ಯಂಡಾಣೆ, ನೆಲ್ಯಹುದಿಕೇರಿ ಮೂಲಕ ರಥಯಾತ್ರೆ ಸಂಚರಿಸಿ ಸಂಪಾಜೆ ಮೂಲಕ ದಕ್ಷಿಣ ಕನ್ನಡ ಪ್ರವೇಶಿಸಲಿದೆ ಎಂದು ಮಾಹಿತಿ ನೀಡಿದರು.
ಹವ್ಯಕ ವಲಯದ ಕಾರ್ಯದರ್ಶಿ ಜಿ.ಆರ್ ನಾರಾಯಣ್ ಮಾತನಾಡಿ, ಗೋಹತ್ಯೆ ನಿಷೇಧಕ್ಕಾಗಿ ರಾಜ್ಯದಾದ್ಯಂತ 1 ಕೋಟಿ ಸಹಿ ಸಂಗ್ರಹಿಸಿ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳಿಗೆ ಕಳುಹಿಸಿಕೊಡುವ ಯೋಜನೆಯಿದೆ. ಜಿಲ್ಲೆಯಲ್ಲಿ 2 ಲಕ್ಷ ಸಹಿ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಸಹಿ ಸಂಗ್ರಹಿಸುವ ಸಲುವಾಗಿ ನಾಲ್ಕು ತಂಡಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಗೋ ಪರಿವಾರ ಸದಸ್ಯ ಪ್ರವೀಣ್, ಟ್ರಸ್ಟ್ನ ಕಾರ್ಯದರ್ಶಿ ರಾಜಾರಾಮ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.