ನಾಪೋಕ್ಲು: ಗಡಿಭಾಗದಲ್ಲಿ ಕನ್ನಡವನ್ನು ಬೆಳೆಸುವಲ್ಲಿ ಅನ್ಯಭಾಷಿಕರ ಕೊಡುಗೆ ಅಪಾರವಾದುದು ಎಂದು ಪತ್ರಕರ್ತ ಜಿ.ರಾಜೇಂದ್ರ ಹೇಳಿದರು.
ಕರಿಕೆಯಲ್ಲಿ ನಡೆದ ಮಡಿಕೇರಿ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ದಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣಗಳನ್ನು ಗ್ರಾಮೀಣರೂ ಕೂಡ ಸುಲಭವಾಗಿ ಬಳಸುತ್ತಿದ್ದಾರೆ. ಸರ್ಕಾರ ಕನ್ನಡ ಲಿಪಿ ಮತ್ತು ನುಡಿಯನ್ನು ಜಾಲತಾಣಕ್ಕೆ ಪರಿವರ್ತನೆ ಮಾಡುವತ್ತ ಗಮನಹರಿಸ ಬೇಕಿದೆ. ಅಂತರ್ಜಾಲದಲ್ಲಿ ಖಾಸಗಿ ಸಂಸ್ಥೆಗಳು ಪುಸ್ತಕ ಹೊರತರುತ್ತಿವೆ. ಸರ್ಕಾರ ಕನ್ನಡ ಭಾಷೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗಂಭಿರ ಪ್ರಯತ್ನವನ್ನು ಮಾಡಬೇಕಿದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ಸಾಹಿತ್ಯ ಕ್ಷೇತ್ರದಲ್ಲಿ ಆರ್.ವಿದ್ಯಾಧರ್, ಕ್ರೀಡಾಕ್ಷೇತ್ರದಲ್ಲಿ ಲಕ್ಷ್ಮಣ ಸಿಂಗ್, ಸಮಾಜಸೇವೆಯಲ್ಲಿ ಭಾಗಮಂಡಲದ ಕುದುಕುಳಿ ಭರತ್, ಕುಯ್ಯಮುಡಿ ಸುನಿಲ್ (ಮಾಧ್ಯಮ), ಚೌರೀರ ಉದಯ (ಶಿಕ್ಷಣ), ತೆನೆಗುಂಡಿ ಚಾಣೆ (ಜನಪದ), ಮರಗೋಡುವಿನ ಪರಿಚನ ಲಕ್ಷ್ಮಣ್ (ನಾಟಿವೈದ್ಯ), ಪ್ರೇಮಾ ಆಚಾರ್ (ಕೃಷಿ ), ಭಾರತಿರಮೇಶ್ (ನೃತ್ಯ) , ಮಡಿಕೇರಿಯ ಮಣಿ (ವಾದ್ಯಸಂಗೀತ), ಮಲ್ಯಮೀದೇರಿರ ಸುಬ್ರಮಣಿ (ರಂಗಭೂಮಿ), ಕೋಡಿ ಭರತ್ (ಕಲೆ), ಹಾಗೂ ಹಿ.ಮಾ.ಜಾರ್ಜ್ (ಯುವಪ್ರತಿಭೆ) ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮ್ಮೇಳನಾಧ್ಯಕ್ಷೆ ಮೊಣ್ಣಂಡ ಶೋಭಾ ಸುಬ್ಬಯ್ಯ ವಹಿಸಿದ್ದರು. ಅರೆಭಾಷಾ ಅಕಾಡೆಮಿ ಅಧ್ಯಕ್ಷ ಜಯರಾಮ, ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ಕಾರ್ಯದರ್ಶಿ ದಯಾನಂದ, ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಳಿಕ ಕರಿಕೆ ಗ್ರಾಮಪಂಚಾಯಿತಿ ಅಧ್ಯಕ್ಷ ಬಾಲಚಂದ್ರನಾಯರ್ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಸ್ಥಳೀಯರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಗಡಿಭಾಗದ ಸಾಹಿತ್ಯಾಸಕ್ತರನ್ನು ರಂಜಿಸಿತು.
ಜಿಲ್ಲಾಪಂಚಾಯಿತಿ ಸದಸ್ಯೆ ಕವಿತಾಪ್ರಭಾಕರ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಸಂಧ್ಯಾ, ಪ್ರಗತಿಪರ ಕೃಷಿಕ ಮಧುಆಚಾರ್, ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.