ಮಡಿಕೇರಿ: ರಾಜಾಸೀಟ್ಗೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಮತ್ತೆ ಬೆಂಕಿ ಅನಾಹುತ ಸಂಭವಿಸಿದೆ. ಸುಮಾರು ನಾಲ್ಕು ಎಕರೆಯಷ್ಟು ಅರಣ್ಯ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕಿಡಿಗೇಡಿಗಳ ಸಿಗರೇಟಿನ ಕಿಡಿಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಮಧ್ಯಾಹ್ನದ ಉರಿಬಿಸಿಲು ವೇಳೆಯಲ್ಲಿ ಕಾಣಿಸಿಕೊಂಡ ಬೆಂಕಿ ಗಾಳಿಗೆ ವ್ಯಾಪಿಸುತ್ತಲೇ ಹೋಯಿತು. ಉದ್ಯಾನದ ಪಕ್ಕದಲ್ಲಿ ಮೊದಲಿಗೆ ಕಾಣಿಸಿಕೊಂಡ ಬೆಂಕಿಯು ಪುಟಾಣಿ ರೈಲು ತನಕ ಹೊತ್ತಿ ಉರಿಯಿತು. ಬೆಟ್ಟದ ಪ್ರದೇಶದಲ್ಲಿದ್ದ ಅಪರೂಪ ಮರ ಹಾಗೂ ಲಾಂಟಾನಾ ಪೊದೆ ಆಹುತಿಯಾಗಿದೆ.
ರಾಜಾಸೀಟ್ ಉದ್ಯಾನದ ಸುತ್ತ ಕಾಂಪೌಂಡ್ ನಿರ್ಮಿಸಲಾಗಿದ್ದು, ಅರಣ್ಯದಂಚಿಗೆ ಅಗ್ನಿಶಾಮಕ ವಾಹನ ಕೊಂಡೊಯ್ಯಲು ಸಾಧ್ಯವಿಲ್ಲ. ಹೀಗಾಗಿ, ಸಿಬ್ಬಂದಿಗೆ ತಕ್ಷಣವೇ ಬೆಂಕಿ ವ್ಯಾಪಿಸುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಅಗ್ನಿ ಶಾಮಕ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ಮರದ ಸೊಪ್ಪು ಹಿಡಿದು ಬೆಂಕಿ ನಿಯಂತ್ರಿಸಿದರು. ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಯಶಸ್ವಿಯಾದರು.
ಎರಡನೇ ಬಾರಿ ಬೆಂಕಿ: ಡಿಸೆಂಬರ್ 26ರಂದೂ ಸಹ ರಾಜಾಸೀಟ್ ಉದ್ಯಾನದಲ್ಲಿ ಬೆಂಕಿ ಕಾಣಿಸಿಕೊಂಡು, 15 ಎಕರೆಯಷ್ಟು ಅರಣ್ಯ ಭಸ್ಮವಾಗಿತ್ತು. ಆಗಲೂ ಸಿಗರೇಟ್ ಸೇದಿ ಬಿಸಾಡಿದ ತುಂಡಿನಿಂದ ಬೆಂಕಿ ಅನಾಹುತ ನಡೆದಿತ್ತು. ಪದೇ ಪದೇ ಉದ್ಯಾನದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿವೆ. ತೋಟಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.