ಸೋಮವಾರಪೇಟೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಡಿಕೇರಿ ಘಟಕದ ಸಮಸ್ಯೆ ಮುಂದುವರಿದಿದ್ದು, ಜಿಲ್ಲಾ ಘಟಕ ನಾಮಕಾವಸ್ಥೆಗೆ ಎಂಬಂತಾಗಿದ್ದು, ಸಾರ್ವಜನಿಕ ಸೇವೆಯಿಂದ ದೂರವೇ ಉಳಿದಿದೆ ಎನ್ನುವಂತಾಗಿದೆ.
ಪ್ರತಿನಿತ್ಯ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದ್ದು ಮಡಿಕೇರಿಯಿಂದ ಸೋಮವಾರಪೇಟೆಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಸರ್ಕಾರಿ ನೌಕರರು, ಖಾಸಗಿ ಉದ್ಯೋಗಕ್ಕೆ ತೆರಳುವವರು, ಶಾಲಾ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಮಡಿಕೇರಿಯಿಂದ ಸೋಮವಾರಪೇಟೆ ಭಾಗಕ್ಕೆ ಬೆಳಿಗ್ಗೆ 7.45 ರ ನಂತರ 9 ಗಂಟೆಯವರೆಗೆ ಬಸ್ ವ್ಯವಸ್ಥೆ ಇಲ್ಲ. 8.30ರ ಬಸ್ ವಾರದಲ್ಲಿ ಮೂರು ದಿವಸ ಇದ್ದರೆ ಉಳಿದ ನಾಲ್ಕು ದಿನಗಳು ಬರುವುದೇ ಇಲ್ಲ. ಬಸ್ ಒಳಗಡೆ ಶುಚಿತ್ವ ಇಲ್ಲದೆ ವಾರಗಳೇ ಕಳೆದಿರುತ್ತದೆ.
ಶಾಸಕ ಡಾ.ಮಂತರ್ಗೌಡರ ಉಪಸ್ಥಿತಿಯಲ್ಲಿ ಇತ್ತೀಚೆಗೆ ಸಭೆ ನಡೆದಿದೆ. ಆದರೆ ಡಿಪೋ ವ್ಯವಸ್ಥಾಪಕರು ಗಮನಹರಿಸುತ್ತಿಲ್ಲ. ಅದರಲ್ಲೂ ಸೋಮವಾರಪೇಟೆ ಭಾಗಕ್ಕೆ ಸಂಪೂರ್ಣ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಪ್ರತಿನಿತ್ಯ ಬಸ್ನಲ್ಲಿ ತೆರಳುತ್ತಿರುವ ನೌಕರರು ಮತ್ತು ವಿದ್ಯಾರ್ಥಿಗಳು ಪತ್ರಿಕೆಯೊಂದಿಗೆ ತಮ್ಮ ಅಳಲನ್ನು ವ್ಯಕ್ತ ಪಡಿಸಿದ್ದಾರೆ.
ಶನಿವಾರ ಬೆಳಿಗ್ಗೆ 7.45ರ ನಂತರ 8.45 ರವರೆಗೆ ಯಾವುದೇ ಬಸ್ ವ್ಯವಸ್ಥೆ ಇರಲಿಲ್ಲ. ನಂತರ ಬಂದ ಬಸ್ ಮಕ್ಕಂದೂರು ಬಳಿ ಕೆಟ್ಟು ನಿಂತಿದೆ. ಪ್ರಯಾಣಿಕರು ಸಂಸ್ಥೆಗೆ ಹಿಡಿಶಾಪ ಹಾಕುತ್ತಾ ನಂತರ 9.15ರ ಬಸ್ನಲ್ಲಿ ಪ್ರಯಾಣ ಬೆಳೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.