ADVERTISEMENT

ಸೋಮವಾರಪೇಟೆ: ಮೀನಾ ಕುಟುಂಬಕ್ಕೆ ಮನೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 1:48 IST
Last Updated 9 ಜೂನ್ 2025, 1:48 IST
ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ಶಾಸಕ ಡಾ. ಮಂತರ್ ಗೌಡ ನಿರ್ಮಿಸಿಕೊಟ್ಟಿರುವ ಮನೆ.
ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ಶಾಸಕ ಡಾ. ಮಂತರ್ ಗೌಡ ನಿರ್ಮಿಸಿಕೊಟ್ಟಿರುವ ಮನೆ.   

ಸೋಮವಾರಪೇಟೆ (ಕೊಡಗು): ತಾಲ್ಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ಯುವಕನಿಂದ ಹತ್ಯೆಗೊಳಗಾಗಿದ್ದ ವಿದ್ಯಾರ್ಥಿನಿಯ ಕುಟುಂಬಕ್ಕಾಗಿ ಶಾಸಕ ಡಾ. ಮಂತರ್ ಗೌಡ ಹೊಸ ಮನೆಯನ್ನು ₹8 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದು, ಜೂನ್‌ 9ರಂದು ಹಸ್ತಾಂತರಗೊಳ್ಳಲಿದೆ.

2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಮೇ10ರಂದು ಪ್ರಕಟವಾದ  ಕೆಲವೇ ಹೊತ್ತಿನಲ್ಲಿ ಹತ್ಯೆಗೊಳಗಾದ ವಿದ್ಯಾರ್ಥಿನಿ ಮೀನಾ(16) ಕುಟುಂಬಕ್ಕೆ ನೀಡಲು ಮನೆಯನ್ನು ನಿರ್ಮಿಸಲಾಗಿದೆ. ಸೂರ್ಲಬ್ಬಿ-ಕುಂಬಾರಗಡಿಗೆ ಗ್ರಾಮದ ಉದಿಯಂಡ ಸುಬ್ರಮಣಿ ಮತ್ತು ಜಾನಕಿ ದಂಪತಿ ಪುತ್ರಿ ಮೀನಾ ಜೊತೆ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಓಂಕಾರಪ್ಪ ಅಲಿಯಾಸ್ ಪ್ರಕಾಶ್‌ ಜೊತೆ ಫಲಿತಾಂಶ ಬಂದ ದಿನ  ಮದುವೆ ನಿಶ್ಚಿತಾರ್ಥ ಆಗಿತ್ತು.  ಹೆಚ್ಚಿನ ಶಿಕ್ಷಣದ  ಹಂಬಲವಿದ್ದ ಮೀನಾ ‘ಈಗಲೇ ಮದುವೆ ಬೇಡ’ ಎಂದು ಪೋಷಕರಲ್ಲಿ ಹೇಳಿದ ಬೆನ್ನಲ್ಲೇ ಪ್ರಕಾಶ್ ಮಚ್ಚಿನಿಂದ ಕೊಚ್ಚಿ  ಕೊಲೆ ಮಾಡಿ, ತಲೆ ಮರೆಸಿಕೊಂಡಿದ್ದ. ನಂತರ ಪೊಲೀಸರು  ಆತನನ್ನುಬಂಧಿಸಿದ್ದರು.

‌ ಶಾಸಕ ಡಾ.ಮಂತರ್ ಗೌಡ  ಮೀನಾ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಸಂದರ್ಭ,  ಮನೆ ಜಾಗಕ್ಕೆ ಯಾವುದೇ ದಾಖಲೆಯಿಲ್ಲ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು,  ಹಿತೈಷಿಗಳ ನೆರವಿನೊಂದಿಗೆ  ಮನೆ ನಿರ್ಮಿಸಿದ್ದಾರೆ.  ಜೂನ್‌ 9ರಂದು ಮನೆಯನ್ನು ಹಸ್ತಾಂತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

‘ ಉನ್ನತ ವ್ಯಾಸಂಗ ಮಾಡಿ ಅಧಿಕಾರಿಯಾಬೇಕೆಂಬ ಆಸೆ ಹೊತ್ತಿದ್ದ ಪುತ್ರಿ ಮೀನಾ ಈಗಿಲ್ಲ. ಆಕೆಯ ನೆನಪಿಗಾಗಿ   ಶಾಸಕರು ಮನೆಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆ. ಅವರಿಗೆ ನಾವು ಚಿರಋಣಿಯಾಗಿದ್ದೇವೆ. ಆದರೆ ಮಗಳಿಲ್ಲದ ನೋವು ಕಾಡುತ್ತಿದೆ’ ಎಂದು ಪೋಷಕರು ತಿಳಿಸಿದರು.

ADVERTISEMENT
ಮೃತಳಾಗಿದ್ದ ವಿದ್ಯಾರ್ಥಿನಿ ಮೀನ

ಇದು ಕರ್ತವ್ಯ: ಶಾಸಕ 

ಮೃತ ಮೀನಾಳ ಮನೆಗೆ ಭೇಟಿ ನೀಡಿದಾಗ ತಮಗೆ ವಾಸಿಸಲು ಉತ್ತಮ ಮನೆಯಿಲ್ಲ. ನಿರ್ಮಿಸಿಕೊಡಿ ಎಂದು ಪೋಷಕರು ಮನವಿ ಮಾಡಿದ್ದರು. ಅಂದು ನೀಡಿದ ಭರವಸೆಯಂತೆ ನಾನು ಹಾಗೂ ಹಿತೈಷಿಗಳು ವೆಚ್ಚ ಭರಿಸಿ ಮನೆಯನ್ನು ನಿರ್ಮಿಸಿದ್ದೇವೆ. ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡಯವುದು ಎಲ್ಲರ ಕರ್ತವ್ಯ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.