ADVERTISEMENT

ಜೋಡುಪಾಲದ ಸಂತ್ರಸ್ತ ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 13:41 IST
Last Updated 16 ಜನವರಿ 2019, 13:41 IST
ಎನ್‌.ಬಿ. ಚರಣ್‌
ಎನ್‌.ಬಿ. ಚರಣ್‌   

ಮಡಿಕೇರಿ: ಪ್ರಕೃತಿ ವಿಕೋಪದಿಂದ ಮನೆ ಹಾಗೂ ಕೃಷಿ ಜಮೀನು ಕಳೆದುಕೊಂಡಿದ್ದ ಸಂತ್ರಸ್ತ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಾಲ್ಲೂಕಿನ ಜೋಡುಪಾಲದ ನಿವಾಸಿ ಎನ್‌.ಬಿ. ಚರಣ್‌ (30) ಆತ್ಮಹತ್ಯೆ ಮಾಡಿಕೊಂಡವರು.

ಚರಣ್‌ ಅವರು ಜ.11ರಂದು ವಿಷ ಸೇವಿಸಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಜ. 12ರಂದು ಮೃತಪಟ್ಟಿದ್ದಾರೆ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

‘2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಚರಣ್‌ ಅವರಿಗೆ ಕೃಷಿ ಜಮೀನಿತ್ತು. ಕಾಫಿ, ಅಡಿಕೆ ಬೆಳೆ ಬೆಳೆದಿದ್ದರು. ಮಹಾಮಳೆಯಿಂದ ಕೃಷಿ ಜಮೀನು ನಾಶವಾಗಿತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದ ಮನೆಯೂ ಕುಸಿದ್ದಿತ್ತು’ ಎಂದು ಕುಟುಂಬದ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.

‘ಬ್ಯಾಂಕ್‌ ಸೇರಿ ವಿವಿಧ ಕಡೆಯಿಂದ ₹ 3 ಲಕ್ಷ ಸಾಲ ಪಡೆದುಕೊಂಡಿದ್ದರು. ಕೃಷಿ ಜಮೀನು ನಾಶವಾದ ಬಳಿಕ ಸಾಲ ತೀರಿಸುವ ಚಿಂತೆ ಅವರನ್ನು ಕಾಡುತ್ತಿತ್ತು. ತಾಯಿಯೂ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಆಸ್ಪತ್ರೆ ಖರ್ಚಿಗೂ ಹಣ ಇರಲಿಲ್ಲ. ಇದರಿಂದ ಹತಾಶೆಗೆ ಒಳಗಾಗಿದ್ದರು. ಧೈರ್ಯ ತುಂಬುವ ಕೆಲಸ ಮಾಡಿದ್ದರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.