ಮಡಿಕೇರಿ: ‘ರೋಟರಿ ಸೇರಿದಂತೆ ಸಾಮಾಜಿಕ ಸೇವಾ ಸಂಘಟನೆಗಳ ನೆರವು ಸಮಾಜದ ನೈಜ ಫಲಾನುಭವಿಗಳಿಗೆ ದೊರಕಿವೆ' ಎಂದು ರೋಟರಿ ಜಿಲ್ಲೆ 3181ರ ಗವರ್ನರ್ ಪಿ. ರೋಹಿನಾಥ್ ಹೇಳಿದರು.
ನಗರದ ರೋಟರಿ ಮಿಸ್ಟಿ ಹಿಲ್ಸ್ಗೆ ಈಚೆಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಮಾತನಾಡಿದ ಅವರು, ‘ಗ್ಲೋಬಲ್ ಗ್ರ್ಯಾಂಟ್ ಯೋಜನೆ ಅಡಿ ಜಾರಿಗೊಳಿಸಲಾದ ಕೊಡಗಿನ 15 ಸಾವಿರ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾದ ವಿಜ್ಞಾನ ಪ್ರಯೋಗಾಲಯ ಅತ್ಯುತ್ತಮ ಯೋಜನೆ’ ಎಂದರು.
ರೋಟರಿ ಜಿಲ್ಲೆಯ ಸಹಾಯಕ ಗವರ್ನರ್ ಧರ್ಮಪುರ ನಾರಾಯಣ್ ಮಾತನಾಡಿ, ‘ಸಂತ್ರಸ್ತರಿಗೆ 50 ಮನೆಗಳನ್ನು ವರ್ಷಾಂತ್ಯದಲ್ಲಿ ನಿರ್ಮಿಸಿಕೊಡಲಾಗುವುದು’ ಎಂದು ಭರವಸೆ ನೀಡಿದರು.
ರೋಟರಿ ಜೋನಲ್ ಲೆಫ್ಟಿನೆಂಟ್ ಚೀಯಣ್ಣ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಿ.ಆರ್.ರವಿಶಂಕರ್, ಕಾರ್ಯದರ್ಶಿ ಯು.ಎಂ. ಮಹೇಶ್, ಮುಂದಿನ ಸಾಲಿನ ಅಧ್ಯಕ್ಷ ಎಂ.ಆರ್. ಜಗದೀಶ್ ಇದ್ದರು.
ಸಂತ್ರಸ್ತರಾದ ಹೆಬ್ಬಟ್ಟಗೇರಿಯ ಬಿ.ವೈ. ಪೂವಪ್ಪ, ಮುಕ್ಕೋಡ್ಲು ಗ್ರಾಮದ ಟಿ.ಕೆ. ಕುಶಾಲಪ್ಪ, ಮಕ್ಕಂದೂರಿನ ಸಿ.ಸಿ. ರತನ್, ನಿಡುವಟ್ಟು ಗ್ರಾಮದ ಎ.ಟಿ. ಮಾದಪ್ಪ, ಮಂಗಳಾದೇವಿ ನಗರದ ಎಚ್.ಆರ್. ಸುಂದರ್ ರಾಜ್ ಅವರಿಗೆ ಆರ್ಥಿಕ ನೆರವು ವಿತರಿಸಲಾಯಿತು.
ಪುಲ್ವಾಮಾದಲ್ಲಿ ಹುತಾತ್ಮರಾದ ವೀರ ಯೋಧರಿಗೆ ರೋಟರಿ ಸದಸ್ಯರು ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.