ADVERTISEMENT

ಉತ್ತಮ ಪರೀಕ್ಷಾ ಫಲಿತಾಂಶಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2011, 6:20 IST
Last Updated 14 ಜನವರಿ 2011, 6:20 IST

ಶ್ರೀನಿವಾಸಪುರ: ಶಿಕ್ಷಕರು ಮತ್ತು ಪೋಷಕರು ಸಮನ್ವಯತೆಯಿಂದ ಮಕ್ಕಳ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದುಕೊಡಲು ಸಾಧ್ಯ ಎಂದು ಶಿಕ್ಷಣಾಧಿಕಾರಿ ಎ.ನಾಗೇಂದ್ರ ಪ್ರಸಾದ್ ಹೇಳಿದರು.ಸುಗಟೂರಿನ ಸಬರಮತಿ ಪ್ರೌಢ ಶಾಲೆಯಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಪೋಷಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.

ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು 30 ನೇ ಸ್ಥಾನದಿಂದ ಮೇಲೆತ್ತಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ.ಈಗಾಗಲೆ ಎಲ್ಲ ವಿಷಯಗಳ ಪ್ರಶ್ನೆ ಕೋಠಿಯನ್ನು ಸಿದ್ಧಪಡಿಸಿ ಎಲ್ಲ ಶಾಲೆಗಳಿಗೂ ವಿತರಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಸಿದ್ಧರಾಗಲು ಪೂರಕವಾಗಿ ಪ್ರಶ್ನೆ ಪತ್ರಿಕೆಗಳನ್ನು ಅಂತರ್ಜಾಲದಲ್ಲಿ ಇಡಲಾಗಿದೆ. ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಹೇಳಿದರು.

  ಗ್ರಾಮೀಣ ಪ್ರದೇಶದ ಪೋಷಕರು ತಮ್ಮ ಮಕ್ಕಳಿಗೆ ಓದಲು ಅವಕಾಶ ಮಾಡಿಕೊಡಬೇಕು. ಅವರು ಓದುವುದನ್ನು ಗಮನಿಸಬೇಕು. ಗುಣಾತ್ಮಕ ಫಲಿತಾಂಶ ಬರಲು ಸಹಕರಿಸಬೇಕು ಎಂದು ಮನವಿ ಮಾಡಿದರು.

  ವಿಷಯ ತನಿಖಾಧಿಕಾರಿ ಅಶೋಕ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಮತ್ತು ಪೋಷಕರು ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹಾಕದೆ ಸರಾಗ ಕಲಿಕೆಗೆ ಅವಕಾಶ ಮಾಡಿಕೊಡಬೇಕು. ಮಕ್ಕಳ ಭವಿಷ್ಯ ಉತ್ತಮಗೊಳ್ಳುವಂತೆ ನೊಡಿಕೊಳ್ಳಬೇಕು. ಕಲಿಕೆಯಲ್ಲಿ ಶಿಕ್ಷಕರಿಗೆ ಇರುವಷ್ಟೇ ಹೊಣೆಗಾರಿಕೆ ಪೋಷಕರಿಗೂ ಇದೆ. ಮಕ್ಕಳ ಓದಿಗೆ ಒತ್ತು ನೀಡುವುದರ ಜೊತೆಗೆ ಅವರು ಉತ್ತಮ ಪ್ರಜೆಗಳಾಗುವಂತೆ ಎಚ್ಚರ ವಹಿಸಬೇಕು. ಮಕ್ಕಳು ಓದಿ ವಿದೇಶಗಳಿಗೆ ಹೋಗಿ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ದೂಡುವ ಪರಿಸ್ಥಿತಿ ಬರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

  ವಿಷಯ ತನಿಖಾಧಿಕಾರಿ ವೆಂಕಟಸ್ವಾಮಿ ಮಾತನಾಡಿ, ಎಸ್‌ಎಸ್‌ಎಸ್‌ಸಿ ಒಂದು ಪ್ರಮುಖವಾದ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಮುಂದುವರೆಯಬೇಕು. ಅದಕ್ಕೆ ಪೂರಕವಾಗಿ ಅಭ್ಯಾಸ ಮಾಡಬೇಕು. ಗುಣಾತ್ಮಕ ಫಲಿತಾಂಶವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.ಮುಖ್ಯ ಶಿಕ್ಷಕ ವಿ.ಬೈರಪ್ಪ, ಹಿರಿಯ ದೈಹಿಕ ಶಿಕ್ಷಕ ಬಿ.ವೆಂಕಟೇಶ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.ಶಿಕ್ಷಕರಾದ ಪಿ.ಬಾಲಕೃಷ್ಣಪ್ಪ ಸ್ವಾಗತಿಸಿದರು. ವೆಂಕಟೇಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.